ಕುಣಿಗಲ್: ನಿಗೂಢವಾಗಿ ಮೃತಪಟ್ಟಿರುವ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ದೊಡ್ಡಕೊಪ್ಪಲು ಮನೆಗೆ ಸಿಬಿಐ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪೋಷಕರ ಮತ್ತು ಅಣ್ಣನ ವಿಚಾರಣೆ ನಡೆಸಿದರು.
ವಿಚಾರಣೆ ಸಮಯದಲ್ಲಿ ಭಾಷಾ ತೊಡಕು ಎದುರಾದ ಕಾರಣ ವಿಚಾರಣೆ ಎರಡೂವರೆ ತಾಸು ನಡೆಯಿತು ಎಂದು ತಿಳಿದುಬಂದಿದೆ. ಸಿಬಿಐ ಅಧಿಕಾರಿ ಡಿ.ಕೃಷ್ಣಮೂರ್ತಿ ನೇತೃತ್ವದ ತಂಡ ಬೆಳಗ್ಗೆ ಹನ್ನೊಂದೂವರೆ ಸುಮಾರಿಗೆ ದೊಡ್ಡಕೊಪ್ಪಲಿಗೆ ಆಗಮಿಸಿತು. ಬೆಂಗಾವಲಿಗಿದ್ದ ಸ್ಥಳೀಯ ಪೊಲೀಸರ ಎಲ್ಲ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಸಿದರು.
ನಂತರ ಡಿ.ಕೆ.ರವಿ ಅವರ ತಂದೆ ಕರಿಯಣ್ಣ, ತಾಯಿ ಗೌರಮ್ಮ ಅಣ್ಣ ರಮೇಶ್ ಅವರನ್ನು ಮಾತ್ರ ವಿಚಾರಣೆ ಆರಂಭಿಸಿದರು. ಸಿಬಿಐ ಅಧಿಕಾರಿಗಳಿಗೆ ಕನ್ನಡ ಬಾರದಿದ್ದುದು, ರವಿ ಪೋಷಕರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬಾರದಿರುವುದು ಒಂದು ಹಂತದಲ್ಲಿ ವಿಚಾರಣೆಗೆ ತೊಡಕುಂಟಾಯಿತು.
ನಂತರ ಅಧಿಕಾರಿಯೊಬ್ಬರು ಭಾಷಾಂತರಕಾರರಾಗಿ ಕನ್ನಡ-ಹಿಂದಿ ತರ್ಜುಮೆ ಮಾಡಿ ವಿವರಿಸದರು ಎಂದು ತಿಳಿದು ಬಂದಿದೆ.ಎರಡೂವರೆ ಗಂಟೆ ವರೆಗೂ ಸುದೀರ್ಘ ವಿಚಾರಣೆ ನಡೆಸಿದ ಅಧಿಕಾರಿಗಳ ತಂಡ ಮಾಹಿತಿ ಪಡೆದು ಬೆಂಗಳೂರು ಕಡೆಗೆ ತೆರಳಿತು.
-ಕನ್ನಡ ಪ್ರಭ