ಕೊಜಿಕೊಡ್, ಕೇರಳ (ಪಿಟಿಐ): ಕರ್ನಾಟಕದ ಒಂದೇ ಕುಟುಂಬಕ್ಕೆ ಸೇರಿದ ಮೂವರು ನೀರು ಪಾಲಾಗಿ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಕಪ್ಪದ್ ಬೀಚ್ನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇಂಧುಧರ್ (24), ಅವರ ತಂದೆ ವೆಂಕಟನಾರಾಯಣ್ (51) ಹಾಗೂ ಅವರ ಸಂಬಂಧಿ ಆರ್.ವಿ. ವೆಂಕಟೇಶ್ (51) ಅವರು ಮೃತ ದುರ್ದೈವಿಗಳು.
ಈ ಮೂವರು ಸೇರಿದಂತೆ 14 ಸದಸ್ಯರ ಕುಟುಂಬ ಕೇರಳ ಪ್ರವಾಸದಲ್ಲಿತ್ತು. ಕಪ್ಪದ್ ಬೀಚ್ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಸ್ನಾನ ಮಾಡಲು ಸಮುದ್ರಕ್ಕಿಳಿದಾಗ ನೀರು ಪಾಲಾಗಿದ್ದಾರೆ. ಅವರ ಚೀರಾಟ ಕೇಳಿ ಸಮೀಪದ ಮೀನುಗಾರರು ಅವರನ್ನು ದಡಕ್ಕೆ ತಂದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅವರು ಬದುಕುಳಿಯಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.