ಬೆಂಗಳೂರು, ಏ.29- ನಮ್ಮ ಪೂರ್ವಿಕರು ಚಪ್ಪಲಿ ಹೊಲಿಯುತ್ತಿದ್ದರು. ತಂದೆ-ತಾಯಿ ಆ ವೃತ್ತಿಯಿಂದ ಆದಾಯ ಇಲ್ಲ ಎಂದು ನಿಲ್ಲಿಸಿದರು. ನಾನು ಪಿಯುಸಿಯಲ್ಲಿ ಪಾಸಾಗಿ ರಾಜಕೀಯಕ್ಕೆ ಬಂದೆ. ರಾಜಕೀಯವನ್ನೇ ವೃತ್ತಿಯಾಗಿಸಿಕೊಂಡು ಈಗ ಸಚಿವನಾಗಿದ್ದೇನೆ.. ಇದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಸಾಮಾಜಿಕ -ಶೈಕ್ಷಣಿಕ ಸಮೀಕ್ಷೆಗೆ ನೀಡಿದ ಮಾಹಿತಿ. ಸಚಿವರ ನಿವಾಸ ಇರುವ ಜಯಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆಗೆ ತಮ್ಮ ಮಾಹಿತಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಂಜನೇಯ ಚಾಲನೆ ನೀಡಿದರು.
ಹತ್ತು ಲಕ್ಷಕ್ಕೂ ಮೇಲ್ಪಟ್ಟ ವರಮಾನ ಇರುವ ಕಾಲಂಗೆ ರೈಟ್ ಮಾರ್ಕ್ ಹಾಕಿದ ಅವರು ಪತ್ನಿ, ಒಬ್ಬ ಮಗಳಿದ್ದಾಳೆ. ಒಬ್ಬ ಅಂಗವಿಕಲ ಅವಲಂಬಿತ ವ್ಯಕ್ತಿ ತಮ್ಮ ಕುಟುಂಬದಲ್ಲಿದ್ದಾರೆ. ಚಿತ್ರದುರ್ಗದಲ್ಲಿ 12 ಎಕರೆ ಸ್ವಯಾರ್ಜಿತ ಜಮೀನಿದೆ. ಬೆಂಗಳೂರಿನ ತಿಪ್ಪಸಂದ್ರದಲ್ಲಿ ಒಂದು ಮನೆ, ಮಹದೇವಪುರದಲ್ಲಿ ಒಂದು ಕೈಗಾರಿಕಾ ಶೆಡ್ ಅದಕ್ಕೆ ಬ್ಯಾಂಕ್ನಿಂದ ಲೋನ್ ಪಡೆದಿರುವುದಾಗಿ ತಿಳಿಸಿದ್ದಾರೆ. ಪತ್ನಿ ವಿಜಯ ಚಿತ್ರದುರ್ಗದಲ್ಲಿ ಹಸು ಸಾಕಾಣೆ ಮಾಡಿ ಕೃಷಿ ಮಾಡುತ್ತಿದ್ದಾರೆ. ಅವರಿಗೆ ಅವರ ತಂದೆ ಕೊಟ್ಟಿರುವ ನಿವೇಶನ ಇದೆ ಎಂದು ಸಚಿವರು ಸಮೀಕ್ಷೆಗೆ ನೀಡಿದ ಮಾಹಿತಿ ನೀಡಿದ್ದಾರೆ.
-ಕೃಪೆ: ಈ ಸಂಜೆ