ಹಾವೇರಿ: ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವೃದ್ಧ ತಂದೆಯ ಮಾನಸಿಕ ನೋವು ನೋಡಲಾಗದೆ ವಕೀಲರೊಬ್ಬರು ನೀಡಿದ ದೂರು ಆಧರಿಸಿ ಅವರ ಮನೆಗೇ ತೆರಳಿದ ಹಾವೇರಿ ಉಪ ವಿಭಾಗಾಧಿಕಾರಿ, ತಂದೆಗೆ₹ 2 ಸಾವಿರ ಮಾಸಾಶನ ಪರಿಹಾರ ನೀಡುವಂತೆ ಮಕ್ಕಳಿಗೆ ಆದೇಶಿಸಿದ ಅಪರೂಪದ ಘಟನೆ ಗುರುವಾರ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.
ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ತಂದೆಯಾದ ಈ ವಯೋವೃದ್ಧ ವ್ಯಕ್ತಿ (ಹೆಸರು ಬಹಿರಂಗ ಪಡಿಸಲು ಇಚ್ಛಿಸಲಿಲ್ಲ), ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 78 ವರ್ಷದ ಅವರಿಗೆ ಪಿಂಚಣಿಯೂ ಬರುತ್ತಿಲ್ಲ.
ದೈನಂದಿನ ಖರ್ಚು ಮತ್ತು ವೈದ್ಯಕೀಯ ಖರ್ಚಿಗೂ ಪರದಾಡುತ್ತಿದ್ದ ಅವರ ಬಗ್ಗೆ ಉಪ ವಿಭಾಗಾಧಿಕಾರಿ ಪಿ. ಶಿವರಾಜ್ ಅವರಿಗೆ ರಾಣೆಬೆನ್ನೂರಿನ ವಕೀಲರೊಬ್ಬರು ದೂರು ಸಲ್ಲಿಸಿದ್ದರು.ನಿವೃತ್ತಿ ಬಳಿಕ ಆಸ್ತಿಯನ್ನು ಮಕ್ಕಳಿಗೆ ಹಂಚಿದ್ದ ಅವರ ಪತ್ನಿ ಇತ್ತೀಚೆಗೆ ನಿಧನರಾಗಿದ್ದರು.
ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಅವರು ಮಾನಸಿಕವಾಗಿ ಖಿನ್ನರಾಗಿ ಹಾಸಿಗೆ ಹಿಡಿದಿರುವ ವಿಷಯ ತಿಳಿದ ಉಪ ವಿಭಾಗಾಧಿಕಾರಿ ಆ ವೃದ್ಧರ ಮನೆಗೆ ಗುರುವಾರ ತೆರಳಿ ಅಂತಿಮ ಸುತ್ತಿನ ವಿಚಾರಣೆಯನ್ನು ಅಲ್ಲಿಯೇ ನಡೆಸಿ, ಮಾಸಾಶನ ನೀಡುವಂತೆ ಮಕ್ಕಳಿಗೆ ಆದೇಶಿದರು.
‘2007ರ ಪೋಷಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅನ್ವಯ ಪೋಷಕರಿಗೆ ಗರಿಷ್ಠ₹ 10,000 ಮಾಸಾಶನ, ಮಕ್ಕಳಿಗೆ ದಂಡ ಹಾಗೂ ಶಿಕ್ಷೆ ವಿಧಿಸುವ ಅಧಿಕಾರ ಇದೆ. ಆದರೆ, ಮಕ್ಕಳ ಆದಾಯವನ್ನೂ ಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ. ಅಷ್ಟು ಮಾತ್ರ ವಲ್ಲ, 2007ರ ಬಳಿಕ ಮಕ್ಕಳಿಗೆ ಹಂಚಲಾದ ಪಿತ್ರಾರ್ಜಿತ ಆಸ್ತಿಯನ್ನೂ ಪೋಷಕರಿಗೆ ವಾಪಸ್ ಕೊಡಿಸುವ ಅಧಿಕಾರವೂ ಇದೆ’ ಎಂದು ಶಿವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳು ಕೇವಲ ಪೋಷಕರ ಆಸ್ತಿಗೆ ಮಾತ್ರ ಹಕ್ಕುದಾರರಲ್ಲ, ಹೆತ್ತವರನ್ನು ಪೋಷಿಸುವುದೂ ಅವರ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ಲಕ್ಷಿಸಿದರೆ ಸರ್ಕಾರ ಮಧ್ಯ ಪ್ರವೇಶಿಸಬಹುದು ಎಂಬ ಎಚ್ಚರಿಕೆ ಯನ್ನು ಈ ಕಾಯಿದೆ ಸ್ಪಷ್ಟವಾಗಿ ನೀಡಿದೆ.‘ಬಹುತೇಕ ಪ್ರಕರಣಗ ಳಲ್ಲಿ ಪೋಷಕರು ಸ್ವತಃ ಮಕ್ಕಳ ವಿರುದ್ಧ ದೂರು ನೀಡುವುದಿಲ್ಲ.
ಇಂತಹ ಪ್ರಕರಣ ಲಕ್ಷಕ್ಕೊಂದು ನಡೆಯ ಬಹುದು. ಈ ಪ್ರಕರಣದಲ್ಲಿ ವೃದ್ಧ ತೀವ್ರವಾಗಿ ನೊಂದಿದ್ದರೂ, ತಮ್ಮ ಮಕ್ಕಳ ಹೆಸರು ಬಹಿರಂಗವಾಗದಂತೆ ವಿನಂತಿಸಿಕೊಂಡದ್ದು ಮಾತ್ರ ಮನಕಲಕುವಂತಿತ್ತು’ ಎಂದರು.