ಬೆಂಗಳೂರು: ‘ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಭಾರತದಲ್ಲೇ ತಯಾರಿಸಿ’ ಎಂಬುದು ಒಂದು ಕನಸಿನ ಪ್ರವಾಸ. ಇದು ಯಶಸ್ವಿಯಾಗದು’ ಎಂದು ಬೆಂಗಳೂರು ಐಐಎಂನ ನಿವೃತ್ತ ಪ್ರಾಧ್ಯಾಪಕ ಡಾ. ಭರತ್ ಜುಂಜನ್ವಾಲಾ ಅಭಿಪ್ರಾಯಪಟ್ಟರು.
ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಬೆಂಗಳೂರು ಜಿಲ್ಲಾ ಮಂಡಳಿ ಭಾನುವಾರ ಇಲ್ಲಿ ಏರ್ಪಡಸಿಿದ್ದ ‘ಭಾರತದಲ್ಲೇ ತಯಾರಿಸಿ: ಒಂದು ವಿಮರ್ಶೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ದೇಶವು ಉತ್ಪಾದನಾ ವಲಯದಲ್ಲಿ ಪ್ರಗತಿ ಸಾಧಿಸಬೇಕು ಎಂಬ ಉದ್ದೇಶದಿಂದ ಮೋದಿ ಅವರು ಚೀನಾವನ್ನು ಮಾದರಿಯಾಗಿಟ್ಟುಕೊಂಡು ಈ ಯೋಜನೆ ಘೋಷಿಸಿದ್ದಾರೆ. ಆದರೆ, ಈಗ ಚೀನಾ ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದರು.
‘ಉತ್ಪಾದನಾ ವಲಯಕ್ಕೆ ಸಾಕಷ್ಟು ಸಂಪನ್ಮೂಲಗಳ ಅಗತ್ಯವಿದೆ. ಪ್ರಮವಾಗಿ ಭೂಮಿ, ನೀರು ಮತ್ತು ವಿದ್ಯುತ್ ಬೇಕು. ನಮ್ಮ ದೇಶದಲ್ಲಿ ಅಷ್ಟು ಪ್ರಮಾಣದ ಸಂಪನ್ಮೂಲಗಳಿಲ್ಲ’ ಎಂದು ಅವರು ಪ್ರತಿಪಾದಿಸಿದರು.
‘ಭಾರತ ಮತ್ತು ಚೀನಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ‘ಚೀನಾದಲ್ಲೇ ತಯಾರಿಸಿ’ ಎಂಬ ಅಭಿಯಾನದಿಂದ ಅಲ್ಲಿ ಹಲವು ಸಮಸ್ಯೆಗಳು ಉಂಟಾಗಿವೆ. ಪರಿಸರ ಮಾಲಿನ್ಯ ಹೆಚ್ಚಿದೆ. ಜನರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ದೇಶದ ಪ್ರಗತಿ ದರ ಕುಂಠಿತವಾಗುತ್ತಿದೆ. ಗಮನಿಸಬೇಕಾದ ಅಂಶ ಎಂದರೆ, ರಫ್ತು ಆಧಾರಿತ ಚೀನಾದ ಉತ್ಪಾದನಾ ಕ್ಷೇತ್ರವು ಈಗ ಅವನತಿಯ ಹಾದಿ ಹಿಡಿದಿದೆ’ ಎಂದು ಅವರು ವಿವರಿಸಿದರು.
‘ಉತ್ಪಾದನಾ ವಲಯದ ಮಾರುಕಟ್ಟೆಗೆ ಮಿತಿ ಇದೆ. ಅದು ವೃದ್ಧಿಯಾಗುವಂತಹದ್ದಲ್ಲ. ಗ್ರಾಹಕರು ತಮಗೆ ಅಗತ್ಯವಿರುವಷ್ಟು ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಕಂಪೆನಿಗಳು ಹೆಚ್ಚು ಹೆಚ್ಚು ಉತ್ಪನ್ನಗಳನ್ನು ತಯಾರಿಸಿದರೆ ಅವುಗಳನ್ನು ಕೊಳ್ಳುವವರು ಯಾರು?’ ಎಂದು ಅವರು ಪ್ರಶ್ನಿಸಿದರು.
‘ಸಾಫ್ಟ್ವೇರ್ ಶಾಪವಲ್ಲ’
‘ಬೆಂಗಳೂರಿಗೆ ಸಾಫ್ಟ್ವೇರ್ ಉದ್ಯಮ ಶಾಪವಾಗಿ ಪರಿಣಮಿಸಿದೆ ಎಂಬ ಭಾವನೆ ಇದೆ. ಸಾಫ್ಟ್ವೇರ್ ಕಂಪೆನಿಗಳಿಂದಾಗಿ ನಗರದಲ್ಲಿ ಮನೆ ಬಾಡಿಗೆ ಸೇರಿದಂತೆ ಇತರ ಅಗತ್ಯ ಸೇವೆಗಳ ದರ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಜೀವಿಸಲು ಸಾಧ್ಯವಾಗುತ್ತಿಲ್ಲ ಎಂಬ ವಾದ ಇದೆ. ಆದರೆ, ನಾನು ಇದನ್ನು ಪೂರ್ಣವಾಗಿ ಒಪ್ಪುವುದಿಲ್ಲ. ಜನರ ಬೇಡಿಕೆಗೆ ಅನುಗುಣವಾಗಿ ಸೇವೆಗಳ ಪೂರೈಕೆ ಆದರೆ, ಬೆಲೆಗಳಲ್ಲಿ ಸ್ಥಿರತೆ ಕಾಣಲಿದೆ. ಇದಕ್ಕೆ ಕೆಲವು ವರ್ಷಗಳು ಬೇಕಾಗಬಹುದು’ ಎಂದು ಜುಂಜನ್ವಾಲಾ ಹೇಳಿದರು.