ಕೆಂಗೇರಿ: ರೈತರ ಶ್ರಮಕ್ಕೆ ತಕ್ಕ ಫಲ ಸಿಗುವಂತೆ ಸರ್ಕಾರ ಕಾಳಜಿ ವಹಿಸಬೇಕೆಂದು ಕವಿ ಡಾ. ಸಿದ್ದಲಿಂಗಯ್ಯ ಅವರು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ವಿದ್ಯಾ ಸಂಸ್ಥೆ, ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರ ಕಸಾಪ ಮತ್ತು ‘ರಂಗಸಮುದ್ರ‘ದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗ್ರಾಮೀಣ ಸಂಸ್ಕೃತಿ ಉತ್ಸವ, ರೈತ ಹಬ್ಬ, ಸುಗ್ಗಿ-ಹುಗ್ಗಿ- ಉತ್ಸವಕ್ಕೆ ಚಾಲನೆ ನೀಡಿದರು.
ಕೃಷಿಯನ್ನೆ ಮರೆಯತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ದರ ಸಿಗದೆ ರಸ್ತೆಯಲ್ಲೆ ಬಿಸಾಡಿ ಹೋಗುವಂತಾಗುತ್ತಿದ್ದು ಅವರ ಕಷ್ಟ ಕಾರ್ಪಣ್ಯಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಗಮನ ಹರಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಕೃಷಿ ಸಂಬಂಧ ಕಾರ್ಯಕ್ರಮ ರೂಪಿಸುವುದರಿಂದ ಯುವ ಜನತೆಯಲ್ಲಿ ಕೃಷಿ ಆಸಕ್ತಿ ಮರುಕರಳಿಸಬಹುದು. ರೈತರು ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ, ಕುರಿಸಾಕಣೆಯನ್ನು ಉಪ ಕಸುಬಾಗಿ ಸ್ವೀಕರಿಸುವುದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದರು.