ಮೈಸೂರು: ಯದುವಂಶದ ದತ್ತು ಪುತ್ರ ಸ್ವೀಕಾರ ಸಮಾರಂಭಕ್ಕೆ ಅರಸರ ಊರಿನ ಅಂಬಾವಿಲಾಸ ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಈ ಅದ್ಧೂರಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಅರಮನೆಯ ಕಲ್ಯಾಣಮಂಟಪದಲ್ಲಿ ಫೆ. 23ರಂದು ಮಧ್ಯಾಹ್ನ 1.20ರಿಂದ 1.50ರವರೆಗೆ ಮಿಥುನ ಲಗ್ನದಲ್ಲಿ ತ್ರಿಪುರಸುಂದರಿದೇವಿ ಮತ್ತು ಸ್ವರೂಪ್ ಆನಂದ್ ಗೋಪಾಲ್ರಾಜ್ ಅರಸ್ ಅವರ ಪುತ್ರ ಯದುವೀರ್ ಗೋಪಾಲ್ರಾಜ್ ಅರಸ್ ಅವರನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದತ್ತು ಸ್ವೀಕರಿಸಲಿದ್ದಾರೆ. ದತ್ತು ಸ್ವೀಕಾರದ ನಂತರ ಯದುವೀರ್ ಅವರ ಹೆಸರನ್ನು ‘ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್’ ಎಂದು ಮರುನಾಮಕರಣ ಮಾಡಲಾಗುತ್ತದೆ.
ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ 6.30ಕ್ಕೆ ಗಣಪತಿ ಮತ್ತು ಚಾಮುಂಡೇಶ್ವರಿ ಪೂಜೆಯೊಂದಿಗೆ ಧಾರ್ಮಿಕ ವಿಧಿಗಳು ಮೊದಲ್ಗೊಳ್ಳಲಿವೆ. ನಂತರ ಗಣಪತಿ ಹೋಮ ಸೇರಿದಂತೆ ವಿವಿಧ ಹೋಮಗಳು ನಡೆಯುತ್ತವೆ. ಅರಮನೆಯ ಮುಂಭಾಗದಲ್ಲಿ ಕಳಸ ಪೂಜೆ, ಚಪ್ಪರ ಪೂಜೆ ಮೊದಲಾದವು ನೆರವೇರಲಿವೆ.
ಮೆರವಣಿಗೆಗೆ ತಾಲೀಮು
ಅರಮನೆ ಆವರಣದಲ್ಲಿ ಸೋಮವಾರ ಸಂಜೆ 6.30ಕ್ಕೆ ಬೆಳ್ಳಿ ರಥದಲ್ಲಿ ಯದುವೀರ್ ಅವರ ಭವ್ಯ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅವರು ಭಾನುವಾರ ಕರಿಕಲ್ಲು ತೊಟ್ಟಿಯಲ್ಲಿ ಬೆಳ್ಳಿರಥದಲ್ಲಿ ಕುಳಿತು ತಾಲೀಮು ನಡೆಸಿದರು.
ರಾಜವಂಶಸ್ಥರ ಸಾಂಪ್ರದಾಯಿಕ ಪೇಟ ಧರಿಸಿ ರಥದಲ್ಲಿ ಠೀವಿಯಿಂದ ಆಸೀನರಾಗಿ ಪೋಷಕರೆಡೆಗೆ ನಗೆ ಬೀರಿದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಮತ್ತು ಅವರ ಸಹೋದರಿಯರು ಅರಮನೆಯ ಕಿಟಕಿಯಿಂದಲೇ ತಾಲೀಮು ನೋಡುತ್ತಾ ಯದುವೀರ್ಗೆ ಸಲಹೆ ನೀಡಿದರು. ಸೋಮವಾರ ನಡೆಯುವ ಯದುವೀರ್ ಅವರ ಮೆರವಣಿಗೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇದೆ.