ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋಮು ಗಲಭೆಯಿಂದ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಶುಕ್ರವಾರ ನಿಯಂತ್ರಣದಲ್ಲಿತ್ತು. ವಿಶ್ವ ಹಿಂದೂ ಪರಿಷತ್ ಶನಿವಾರ ಬಂದ್ಗೆ ಕರೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ನಿಷೇಧಾಜ್ಞೆಯನ್ನು ಇದೇ 25ರವರೆಗೆ ಮುಂದುವರಿಸಲಾಗಿದೆ.
ರೂ 10 ಲಕ್ಷ ಪರಿಹಾರ: ಹಲ್ಲೆಯಲ್ಲಿ ಗಾಯಗೊಂಡು ಮೃತಪಟ್ಟ ಖಾಸಗಿ ಕಂಪೆನಿ ಉದ್ಯೋಗಿ ವಿಶ್ವನಾಥ್ ಶೆಟ್ಟಿ ಅವರ ಕುಟುಂಬಕ್ಕೆ ಸರ್ಕಾರ ರೂ 10 ಲಕ್ಷ ಪರಿಹಾರ ಘೋಷಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ರೂ5 ಲಕ್ಷ ಮುಂಗಡವಾಗಿ ನೀಡಿದರು. ಅವರ ಇಬ್ಬರು ಮಕ್ಕಳ ಶಿಕ್ಷಣದ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು.
ನಂದಿನಿ ಲೇಔಟ್ನ ಅವರ ಪೋಷಕರ ಮನೆಯಿಂದ ಹೊರಟ ಪಾರ್ಥಿವ ಶರೀರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ 34 ವರ್ಷದ ವಿಶ್ವನಾಥ್ ಅವರ ಮೊದಲ ಪತ್ನಿ ಅನಾರೋಗ್ಯದ ಕಾರಣ ಮೃತಪಟ್ಟಿದ್ದು, ಕಳೆದ ವರ್ಷವಷ್ಟೇ ಮರು ಮದುವೆಯಾಗಿದ್ದರು.
ಬಿಗಿ ಬಂದೋಬಸ್ತ್: ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 2 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.
ನಾಲ್ವರು ಎಸ್ಪಿ, 8 ಡಿವೈಎಸ್ಪಿ, 120 ಪಿಎಸ್ಐ ಸೇರಿದಂತೆ ಹಲವು ಮೀಸಲು ಪಡೆ ತುಕಡಿ ನಿಯೋಜಿಸ ಲಾಗಿದೆ.
ಬೈಕ್, ಲಾರಿ ಜಖಂ: ಶುಕ್ರವಾರ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ವಿನೋಬನಗರ ಪೊಲೀಸ್ ಚೌಕಿಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಲಾರಿ ಜಖಂಗೊಳಿಸಿದ್ದಾರೆ. ಕುಂಬಾರ ಗುಂಡಿ, ಗಾಂಧಿ ಬಜಾರ್, ಜಿಲ್ಲಾ ಪಂಚಾಯ್ತಿ, ಜೈಲ್ ಸರ್ಕಲ್ ಬಳಿ ನಾಲ್ಕು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ. ಅದರಲ್ಲಿ ಟಿ.ವಿ ವಾಹಿನಿಯೊಂದರ ಕ್ಯಾಮೆರಾಮನ್ ಬೈಕ್ ಸಹ ಒಳಗೊಂಡಿದೆ. ಕೆಲವೆಡೆ ಸಣ್ಣಪುಟ್ಟ ಹಲ್ಲೆಯ ಯತ್ನಗಳು ನಡೆದಿವೆ.
ಗಾಜನೂರು ಗ್ರಾಮಸ್ಥರ ಪ್ರತಿಭಟನೆ: ಸಮಾವೇಶಕ್ಕೆ ಆಗಮಿಸಿದ್ದ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ತೀರ್ಥಹಳ್ಳಿ ರಸ್ತೆಯಲ್ಲಿರುವ ಕೆಲ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗ್ರಾಮಸ್ಥರನ್ನು ಥಳಿಸಿದ್ದಾರೆ. ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಗಾಜನೂರು ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆ ಚೆಕ್ಪೋಸ್ಟ್ ಬಳಿ ಕೆಲ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ: ಪಿಎಫ್ಐ ಸಂಘಟನೆಯ ಸಮಾವೇಶಕ್ಕೆ ರಾಷ್ಟ್ರೀಯ ಮುಖಂಡರೂ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕಾರ್ಯಕರ್ತರು ಆಗಮಿಸಿದ್ದರೂ, ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿಲ್ಲ. ದೇಶದ ವಿರುದ್ಧ ಘೋಷಣೆ ಕೂಗಿದರೂ, ನಿಯಂತ್ರಿಸಿಲ್ಲ.
ಹೊರ ರಾಜ್ಯದ ವಾಹನಗಳಲ್ಲಿ ಮಾರಕಾಸ್ತ್ರ ಇದ್ದರೂ ವಶಕ್ಕೆ ಪಡೆದಿಲ್ಲ. ಕೂಡಲೇ, ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಆರ್. ಕೆ.ಸಿದ್ದರಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಇಂದೂ ಶಾಲೆಗೆ ರಜೆ
ನಗರ ವ್ಯಾಪ್ತಿಯ ಎಲ್ಲ ಶಾಲಾ–ಕಾಲೇಜುಗಳಿಗೆ ಫೆ. 21ರಂದು ರಜೆ ಘೋಷಿಸಲಾಗಿದೆ. ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿರುವ ನಿಷೇಧಾಜ್ಞೆ (144 ಸೆಕ್ಷನ್)ಯನ್ನು ಫೆ. 25ರವರೆಗೂ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.