ಬೆಂಗಳೂರು: ಇಲ್ಲಿನ ಆನಂದರಾವ್ ವೃತ್ತದಲ್ಲಿರುವ ತನ್ನ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಒಂದೆರಡು ದಿನಗಳಲ್ಲಿ ಹಸ್ತಾಂತರ ಮಾಡಲು ನಿರ್ಧರಿಸಿರುವ ಜೆಡಿಎಸ್, ಈ ಕಟ್ಟಡದಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹೊರಕ್ಕೆ ಸಾಗಿಸುವ ಕೆಲಸವನ್ನು ಶನಿವಾರ ಆರಂಭಿಸಿದೆ.
ದಳ ಕಚೇರಿ ಇದ್ದ ಕಟ್ಟಡ ಕಾಂಗ್ರೆಸ್ಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಜೆಡಿಎಸ್ ಸಲ್ಲಿಸಿರುವ ಪರಿಹಾರಾತ್ಮಕ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಕಟ್ಟಡ ತೆರವು ಮಾಡುವುದು ಜೆಡಿಎಸ್ಗೆ ಅನಿವಾರ್ಯವಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಉಪಸ್ಥಿತಿಯಲ್ಲೇ ಕಟ್ಟಡದಲ್ಲಿದ್ದ ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಪೀಠೋಪಕರಣ, ಕಡತಗಳನ್ನು ಹೊರಕ್ಕೆ ಸಾಗಿಸಲು ಏರ್ಪಾಟು ಮಾಡಲಾಗುತ್ತಿದೆ. ಭಾನುವಾರ ಅಥವಾ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ಕಚೇರಿ ಕಟ್ಟಡದ ಕೀಲಿಯನ್ನು ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಪರಮೇಶ್ವರ್ ಅವರಿಗೆ ಪತ್ರವೊಂದನ್ನು ಬರೆಯಲು ದೇವೇಗೌಡರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೊದಲ ಮಹಡಿಯಲ್ಲಿದ್ದ ಪೀಠೋಪಕರಣಗಳನ್ನು ಕೆಳಕ್ಕೆ ತರಲಾಗಿದೆ. ಭಾನುವಾರ ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತದೆ. ಒಕ್ಕಲಿಗರ ಭವನಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಬಿಟ್ಟಿರುವ ಜೆಡಿಎಸ್ ಈಗ ಶೇಷಾದ್ರಿಪುರ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಸಗಿ ಮನೆಯೊಂದನ್ನು ಬಾಡಿಗೆಗೆ ಪಡೆಯಲು ಮುಂದಾಗಿದೆ.
ಕಚೇರಿ ಆವರಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ದೇವೇಗೌಡ, ‘ಈಗ ಕಚೇರಿಯಲ್ಲಿರುವ ಪೀಠೋಪಕರಣ, ಕಡಗಳನ್ನು ಹೊರಕ್ಕೆ ಇರಿಸುವಂತೆ ಸೂಚನೆ ನೀಡಿದ್ದೇನೆ. ಬೇರೆ ಕಟ್ಟಡ ಗುರುತಿಸಿದ ಬಳಿಕ ಅಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ. ಒಕ್ಕಲಿಗರ ಸಂಘದಲ್ಲಿ ಎಲ್ಲ ಪಕ್ಷಗಳ ಸದಸ್ಯರೂ ಇದ್ದಾರೆ. ಅಲ್ಲಿ ಬೇರೆ ಪಕ್ಷದವರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಒಕ್ಕಲಿಗರ ಭವನಕ್ಕೆ ಕಚೇರಿ ಸ್ಥಳಾಂತರ ಮಾಡುತ್ತಿಲ್ಲ’ ಎಂದು ಹೇಳಿದರು.