ಬೆಂಗಳೂರು: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದರಿಂದ ಅತ್ಯಾಚಾರ ಪ್ರಕರಣ ತಡೆಯಲು ಸಾಧ್ಯವಿಲ್ಲ. ಕಾನೂನು ಕೇವಲ ಶಿಕ್ಷೆ ವಿಧಿಸುತ್ತದೆ ಅಷ್ಟೆ. ಹಾಗಾಗಿ ಅತ್ಯಾಚಾರ ನಿಯಂತ್ರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಮತ್ತು ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಅಭಿಪ್ರಾಯಪಟ್ಟರು.
ನಗರದಲ್ಲಿ ನಡೆದ ಬಿಎಂಎಸ್ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ನಿನ್ನ ಮೇಲೆ ಅತ್ಯಾಚಾರವೆಸಗಿದರೆ ಅಂಥವರನ್ನು ನೇಣಿಗೇರಿಸುತ್ತೇವೆ’ ಎಂದು ಹೇಳಿದರೆ ಹೇಗೆ? ಕಾನೂನು ಶಿಕ್ಷೆ ನೀಡುತ್ತದೆಯೇ ಹೊರತು ಅತ್ಯಾಚಾರವನ್ನು ನಿಯಂತ್ರಿಸುವುದಿಲ್ಲ. ಉತ್ತಮ ಚಾರಿತ್ರ್ಯದ ವ್ಯಕ್ತಿತ್ವ ಹೊಂದಿದವರು ಮಾತ್ರ ಇಂಥ ಕೃತ್ಯ ಎಸಗುವುದಿಲ್ಲ ಎಂದರು.
‘ಕಾನೂನು ಉಲ್ಲಂಘನೆ ಹೆಚ್ಚುತ್ತಿದೆ. ವಿದ್ಯಾವಂತರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮಂತ್ರಿಗಳು, ಶಾಸಕರು, ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಮೋಸ, ಅತ್ಯಾಚಾರ, ಕೊಲೆ, ಸುಲಿಗೆ ಹೆಚ್ಚುತ್ತಿದೆ. ಕಾನೂನು ಇದ್ದರೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ವಕೀಲರ ಕೈಯಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ’ ಎಂದು ಮಳಿಮಠ ಅವರು ವಿಷಾದಿಸಿದರು.
ಕಾನೂನು ಕ್ಷೇತ್ರದಲ್ಲಿ ಬೆಳವಣಿಗೆ ಆಗಿಲ್ಲ: ‘ವೈದ್ಯಕೀಯ, ಎಂಜಿನಿಯರ್, ತಾಂತ್ರಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಬೆಳವಣಿಗೆ ಆಗಿದೆ. ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಿವೆ. ಆದರೆ, ಕಾನೂನು ಕ್ಷೇತ್ರ ನಿಂತ ನೀರಾಗಿದೆ. ಹಿಂದೆ ಮಾಡಿದ್ದ ಕಾನೂನುಗಳನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ ಅಷ್ಟೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ, ಹಿರಿಯ ವಕೀಲ ಡಾ.ಬಿ.ವಿ.ಆಚಾರ್ಯ, ಬಿಎಂಎಸ್ ಕಾನೂನು ಕಾಲೇಜಿನ ಅಧ್ಯಕ್ಷೆ ಡಾ.ರಾಗಿಣಿ ನಾರಾಯಣ, ಟ್ರಸ್ಟಿಗಳಾದ ಡಾ.ಪಿ.ದಯಾನಂದ ಪೈ, ಕೆ.ಜೈರಾಜ್, ಕಾಲೇಜಿನ ಸಲಹೆಗಾರ ಡಾ.ವಿ.ಬಿ.ಕುಟಿನ್ಹೊ ಹಾಗೂ ಪ್ರಾಂಶುಪಾಲರಾದ ಡಾ.ಸೀಮಾ ಸುರೇಂದ್ರನ್ ಇದ್ದರು.
ವಕೀಲರ ಪರಿಷತ್-: ನೋಂದಣಿಗೆ ಹೊಸ ಕಾನೂನು– ಚಿಂತನೆ
‘ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಣಿ ನಿಯಮಕ್ಕೆ ಬದಲಾವಣೆ ತರಲು ಚಿಂತಿಸುತ್ತಿದ್ದೇವೆ. ಬೇರೆ ವೃತ್ತಿ ಮಾಡಿಕೊಂಡು ವಕಾಲತ್ತಿನಲ್ಲಿ ತೊಡಗುವವರಿಗೆ ನೋಂದಣಿ ನಿರ್ಬಂಧಿಸಲಾಗುವುದು. ಪೂರ್ಣಾವಧಿ ವಕೀಲ ವೃತ್ತಿಯಲ್ಲಿ ತೊಡಗುವವರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಪರಿಷತ್ ಅಧ್ಯಕ್ಷ ಪಿ.ಪಿ.ಹೆಗ್ಡೆ ಅವರು ತಿಳಿಸಿದರು.
‘ಪರಿಷತ್ತಿನಲ್ಲಿ ಹೆಸರನ್ನು ನೋಂದಾಯಿಸಿ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿರುವ ವಿಷಯ ಗಮನಕ್ಕೆ ಬಂದಿದೆ. ಕೆಲವರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಇದು ಪರಿಷತ್ತಿನ ನಿಯಮಕ್ಕೆ ವಿರುದ್ಧ. ಪರಿಷತ್ತಿನಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವ ಕಾನೂನು ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕುಸಿತವಾಗಿದೆ. ಹೆಚ್ಚಿನವರು ಬಹುರಾಷ್ಟ್ರೀಯ ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಿ ಹೋಗುತ್ತಿದ್ದಾರೆ’ ಎಂದು ಹೇಳಿದರು.