ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಕೇಜ್ರಿವಾಲ್ ಹಾಗೂ ಅವರ ಸಂಪುಟ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಮನೀಷ್ ಸಿಸೋಡಿಯಾ, ಅಸೀಂ ಅಹಮದ್ ಖಾನ್, ಸಂದೀಪ್ ಕುಮಾರ್, ಸತ್ಯೇಂದ್ರ ಜೈನ್, ಗೋಪಾಲ್ ರಾಯ್ ಮತ್ತು ಜಿತೇಂದ್ರ ಸಿಂಗ್ ತೋಮರ್ ಕೇಜ್ರಿವಾಲ್ ಸಂಪುಟ ಸೇರಿದ ಸಚಿವರು. ಮನೀಷ್ ಸಿಸೋಡಿಯಾ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾರೆ.
ಮಾಮೂಲಿನಂತೆ ಕಡು ನೀಲಿ ಬಣ್ಣದ ತುಂಬು ತೋಳಿನ ಸ್ವೆಟರ್, ತಲೆ ಮೇಲೆ ಬಿಳಿ ಬಣ್ಣದ ಟೋಪಿ ತೊಟ್ಟಿದ್ದ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿ ಬೆಂಬಲಿಗರಿಗೆ ಕೈ ಬೀಸಿದರು. ಸಿಸೋಡಿಯಾ ತುಂಬು ತೋಳಿನ ಕೆಂಪು ಸ್ವೆಟರ್, ಬಿಳಿ ಟೋಪಿ ಧರಿಸಿದ್ದರು. ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೆಹಲಿ ವಿವಿಧೆಡೆಗಳಿಂದಲ್ಲದೆ, ನೆರೆ ರಾಜ್ಯಗಳಿಂದಲೂ ಬೆಂಬಲಿಗರು ರಾಮಲೀಲಾ ಮೈದಾನಕ್ಕೆ ಧಾವಿಸಿದ್ದರು.
ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಮಕ್ಕಳು, ಮಹಿಳೆಯರೂ, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ಜನ ಬಂದಿದ್ದರು. ಕೆಲವರು ರಾಷ್ಟ್ರ ಧ್ವಜಗಳನ್ನು ಹಿಡಿದಿದ್ದರು. ಅನೇಕರ ಕೈಗಳಲ್ಲಿ ಪಕ್ಷದ ಚಿಹ್ನೆ ‘ಪೊರಕೆ’ ಇತ್ತು. ಪ್ರಧಾನಿ ಮೋದಿ, ಕೇಂದ್ರ ಸಚಿವರು ಸೇರಿದಂತೆ ಗಣ್ಯರು ಯಾರೂ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.
‘ಅಧಿಕಾರದ ಮದ ಅಪಾಯ’
‘ಅಧಿಕಾರದ ಮದ ನೆತ್ತಿಗೆ ಏರದಂತೆ ನಡೆದುಕೊಳ್ಳಬೇಕು. ಅಧಿಕಾರದ ಅಹಂಕಾರದಿಂದಲೇ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸೋಲು ಕಂಡಿದ್ದು’ ಎಂದು ಕೇಜ್ರಿವಾಲ್ ನೆನಪಿಸಿದರು.
ರಾಮಲೀಲಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ಅವರು, ‘ಕಾರ್ಯಕರ್ತರು ಸೌಜನ್ಯದಿಂದ ನಡೆದುಕೊಳ್ಳಬೇಕು. ದುಂಡಾವರ್ತಿ ಮಾಡಬಾರದು. ಯಾರಾದರೂ ಆಮ್ ಆದ್ಮಿಗಳೆಂದು ಹೇಳಿಕೊಂಡು ಗೂಂಡಾಗಿರಿ ಮಾಡಿದರೆ ಕೂಡಲೇ ಬಂಧಿಸಿ’ ಎಂದು ವೇದಿಕೆಯಿಂದಲೇ ಪೊಲೀಸರಿಗೆ ಮುಖ್ಯಮಂತ್ರಿ ಸೂಚಿಸಿದರು.
ಚುನಾವಣೆ ಫಲಿತಾಂಶ ದೊಡ್ಡ ಪವಾಡ. ಒಟ್ಟು 70 ಸ್ಥಾನದಲ್ಲಿ ಮೂರು ಬಿಟ್ಟು ಉಳಿದೆಲ್ಲವನ್ನು ಗೆಲ್ಲುವುದು ಹುಡುಗಾಟವಲ್ಲ. ನಿಜಕ್ಕೂ ಇದು ‘ದೇವರೇ ಕರುಣಿಸಿದ ಪವಾಡ’ ಎಂದು ವಿಶ್ಲೇಷಿಸಿದರು.
‘ದೆಹಲಿಯ ಜನ ನಮ್ಮನ್ನು ಪ್ರೀತಿಸುತ್ತಾರೆಂದು ಗೊತ್ತಿತ್ತು. ಆದರೆ, ಇಷ್ಟರ ಮಟ್ಟಿಗೆ ಪ್ರೀತಿಸುತ್ತಾರೆಂದು ಗೊತ್ತಿರಲಿಲ್ಲ’ ಎಂದು ಹೇಳುವಾಗ ಭಾವೋನ್ಮಾದಕ್ಕೊಳಗಾದರು. ‘ನಾವು ಸಾಮಾನ್ಯರಿಗಿಂತ ಯಾವುದೇ ರೀತಿ ದೊಡ್ಡವರಲ್ಲ. ಎಎಪಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿಗೆ ಅವಕಾಶ ಇಲ್ಲ ಎಂದು’ ಸ್ಪಷ್ಟಪಡಿಸಿದರು.