ದಾವಣಗೆರೆ, ಫೆ.8: ಮದುವೆ ಕಾರ್ಯಕ್ಕೆ ತೆರಳುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವಧುವಿನ ತಂದೆ ಸೇರಿ ಐವರು ಮೃತಪಟ್ಟು 17 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಹುಣಸೆಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ವಧುವಿನ ತಂದೆ ನಿಟ್ಟೂರಿನ ನಿವಾಸಿ ರಾಮಕೃಷ್ಣ (48 ), ದೊಡ್ಡಮ್ಮ ಲಕ್ಷ್ಮಮ್ಮ(45), ರಾಜಣ ್ಣ (30) ಲಕ್ಷ್ಮಮ್ಮ (42) ಹಾಗೂ ಚಾಲಕ ಅಶ್ರಫ್(45) ಎಂದು ಗುರುತಿಸಲಾಗಿದೆ. ವಧು ಮೇರಿ, ಸಿದ್ದೇಶ್, ಗಂಗಮ್ಮ, ರತ್ನಕುಮಾರಿ, ವಿನುತಾ, ಚಂದ್ರಪ್ಪ, ಋತು, ಆಂಧ್ರ ಮೂಲದ ಅನಂತಲಕ್ಷ್ಮೀ, ಮಂಗಳಾ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ವಿನುತಾಳನ್ನು ಹೊರತುಪಡಿಸಿ ಉಳಿದ ಎಲ್ಲ ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಬಳ್ಳಾರಿಯ ನಿವಾಸಿ ರಾಮಾಂಜನೇಯ ಎಂಬರೊಂದಿಗೆ ಮೃತ ರಾಮಕೃಷ್ಣರ ಮಗಳು ಮೇರಿಯ ಮದುವೆ ನಿಶ್ಚಯವಾಗಿತ್ತು. ಬಳ್ಳಾರಿಯಲ್ಲಿ ನಾಳೆ ನಡೆಯಲಿದ್ದ ಮದುವೆ ಕಾರ್ಯಕ್ಕೆ ಹರಿಹರ ತಾಲೂಕಿನ ಮಲೆಬೆನ್ನೂರು ಬಳಿಯ ನಿಟ್ಟೂರು ಗ್ರಾಮದಿಂದ ರಾಮಕೃಷ್ಣ ಕುಟುಂಬದವರು ಸೇರಿದಂತೆ 20ಕ್ಕೂ ಹೆಚ್ಚು ಜನರು ವಾಹನದಲ್ಲಿ ತೆರಳುತ್ತಿದ್ದರು. ಚಿತ್ರದುರ್ಗ ಮಾರ್ಗವಾಗಿ ಬಳ್ಳಾರಿಗೆ ಹೋಗುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನಾ ಸ್ಥಳದಲ್ಲಿ ರಕ್ತ ಹರಿದು ಭೀಕರ ಸನ್ನಿವೇಶ ನಿರ್ಮಾಣವಾಗಿತ್ತು.