ಬೆಂಗಳೂರು: ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.
ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಅಪೇಕ್ಷಿಸಿದ ಖಾತೆ ನೀಡುವುದು ಸೇರಿದಂತೆ ಸಚಿವರು ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಆ ಬಳಿಕವೇ ಅಬಕಾರಿ ಸಚಿವರು ಪಟ್ಟು ಸಡಿಲಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ಮುನಿಸಿಕೊಂಡಿದ್ದ ಸತೀಶ್, ಮಂಗಳವಾರ ಗೋಕಾಕದಿಂದ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದರು. ಮೂರು ದಿನಗಳ ಕಾಲ ಅವರ ಮನವೊಲಿಕೆಗೆ ನಡೆಸಿದ್ದ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಶುಕ್ರವಾರ ರಾತ್ರಿ ಬೆಂಗಳೂರಿಗೆ ಬಂದ ಅಬಕಾರಿ ಸಚಿವರನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿವಾಸದಲ್ಲಿ ಭೇಟಿ ಮಾಡಿದ ಸಿದ್ದರಾಮಯ್ಯ ಮನವೊಲಿಸಿದರು.
ಸಿದ್ದರಾಮಯ್ಯ, ಮಹದೇವಪ್ಪ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬೆಳಗಾವಿ ಕಾಂಗ್ರೆಸ್ ನಿಯೋಗದ ಸದಸ್ಯರು ಜೊತೆಗೂಡಿ ಸತೀಶ್ ಅವರ ಮನವೊಲಿಕೆಗೆ ಯತ್ನಿಸಿದರು. ತಾವು ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ ಬಳಿಕ ಅಬಕಾರಿ ಸಚಿವರು ಮಣಿದರು ಎಂದು ಮೂಲಗಳು ತಿಳಿಸಿವೆ.
ಸತೀಶ್ ಅಪೇಕ್ಷಿಸಿದಂತೆ ಜನಸಂಪರ್ಕಕ್ಕೆ ಪೂರಕವಾದ ಖಾತೆ ನೀಡುವುದಾಗಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂಬ ವಾಗ್ದಾನವನ್ನೂ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಸತೀಶ್ ಅವರ ಸಹಮತ ಇಲ್ಲದೆ ನಿರ್ಧಾರ ಕೈಗೊಳ್ಳುವುದಿಲ್ಲ. ಈಗ ಆ ರೀತಿ ಆಗಿರುವ ಪ್ರಕರಣಗಳಲ್ಲಿ ಲೋಪ ಸರಿಪಡಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಚಿವರಿದ್ದಲ್ಲಿಗೆ ಸಿ.ಎಂ ದೌಡು: ಬೆಳಿಗ್ಗೆಯೇ ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದ ಅಬಕಾರಿ ಸಚಿವರು ಸಂಜೆ ವೇಳೆ ಬೆಂಗಳೂರು ತಲುಪಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹಾಜರಿಯಲ್ಲಿ ಕೆಪಿಸಿಸಿಯಲ್ಲಿ ಗುಂಪು ಚರ್ಚೆ ನಡೆಯುತ್ತಿದ್ದರೂ ಅಲ್ಲಿಗೆ ಅವರು ಹೋಗಿರಲಿಲ್ಲ. ರಾತ್ರಿ 9 ಗಂಟೆ ಸುಮಾರಿಗೆ ಕುಮಾರ ಪಾರ್ಕ್ನಲ್ಲಿರುವ ಲೋಕೋಪಯೋಗಿ ಸಚಿವರ ಬಂಗಲೆಗೆ ಬಂದರು.
ಸತೀಶ್ ಅವರು ಮಹದೇವಪ್ಪ ನಿವಾಸದಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಯವರು ಕೆಪಿಸಿಸಿಯಲ್ಲಿ ನಡೆಯುತ್ತಿದ್ದ ಗುಂಪು ಚರ್ಚೆಯಿಂದ ಹೊರ ನಡೆದರು. ನೇರವಾಗಿ ಲೋಕೋಪಯೋಗಿ ಸಚಿವರ ನಿವಾಸಕ್ಕೆ ದೌಡಾಯಿಸಿದರು. ಬೆಳಗಾವಿ ಕಾಂಗ್ರೆಸ್ ಮುಖಂಡರೂ ಅಲ್ಲಿಗೆ ಬಂದರು. ಕೆಲ ಹೊತ್ತಿನ ಬಳಿಕ ಸಚಿವ ಡಿ. ಕೆ. ಶಿವಕುಮಾರ್ ಕೂಡ ಅವರನ್ನು ಸೇರಿಕೊಂಡು ಅಬಕಾರಿ ಸಚಿವರ ಮನವೊಲಿಕೆಯಲ್ಲಿ ಭಾಗಿಯಾದರು.
ನಿರ್ಧಾರ ಹಿಂದಕ್ಕೆ
ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ‘ನಾನು ಪಕ್ಷ ಸಂಘಟನೆ ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜೀನಾಮೆ ನೀಡಿದ್ದೆ. ಇದಕ್ಕೆ ಬೇರೆ ಯಾವುದೇ ಕಾರಣ ಇಲ್ಲ. ಮುಖ್ಯಮಂತ್ರಿಯವರ ಮನವಿ ಮೇರೆಗೆ ಆ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದೇನೆ’ ಎಂದರು.
