ಕರ್ನಾಟಕ

ಜಾರಕಿಹೊಳೆ ಖಾತೆ ಬದಲು: ಸಿಎಂ ಭರವಸೆ

Pinterest LinkedIn Tumblr

satish-jarkiholi

ಕೊಪ್ಪಳ: ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಖಾತೆ ಬದಲಿಸುವಂತೆ ಕೇಳಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಅವರ ಖಾತೆ ಬದಲಾವಣೆ ಮಾಡಲಾಗುವುದು ಎಂದು ಸಿಎಂ ಎಸ್.ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಕುಷ್ಟಗಿಯಲ್ಲಿ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು, ತಾಲೂಕಿನ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂದಿಳಿದಾಗ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಜಾರಕಿಹೊಳಿ ಹೊರತುಪಡಿಸಿ, ಬೇರೆ ಯಾವುದೇ ಖಾತೆಯ ಸಚಿವರು ತಮ್ಮ ಖಾತೆ ಬದಲಿಸುವಂತೆ ನನ್ನ ಮುಂದೆ ಪ್ರಸ್ತಾಪಿಸಿಲ್ಲ. ಸದ್ಯಕ್ಕೆ ಸಂಚಿವ ಸಂಪುಟ ವಿಸ್ತರಣೆ ಇಲ್ಲ. ಜಾರಕಿಹೊಳಿ ಅವರ ಬಳಿ ಮತ್ಯಾವ ಬೇಡಿಕೆ ಇಲ್ಲ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಕುರಿತು ಅಲ್ಲಿಯ ಮುಖಂಡರು ಚರ್ಚಿದ್ದಾರೆ. ಸಚಿವ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ವೈಮನಸು ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ಸಚಿವ ಅಂಬರೀಶ್ ರೇಗಾಡಿದರು ಎಂಬುದು ಮಾಧ್ಯಮಗಳ ಸೃಷ್ಟಿ. ಅಲ್ಲಿ ಯಾರೂ ರೇಗಾಡಿಲ್ಲ,”ಎಂದು ಪ್ರತಿಕ್ರಿಯಿಸಿದರು.

ಡಿಸಿಎಂ ಮಾಡಿದ್ದು ಶಾಸಕರು: ”ಮಾಜಿ ಪ್ರಧಾನಿ ದೇವೇಗೌಡರು ಈ ಹಿಂದೆ ನನ್ನನ್ನು ಡಿಸಿಎಂ ಮಾಡಿಲ್ಲ. ಜೆಡಿಎಸ್ ಶಾಸಕರು ನನ್ನನ್ನು ಡಿಸಿಎಂ ಮಾಡಿದ್ದರು,”ಎಂದು ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು.

ವಸತಿ ಶಾಲೆಗೆ ಸಿಎಂ ಭೇಟಿ, ಪ್ರಶಂಸೆ
ತಾಲೂಕಿನ ಟಣಕನಕಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿನ ಸುವ್ಯವಸ್ಥೆ ಹಾಗೂ ಶಿಸ್ತು ನೋಡಿದ ಸಿಎಂ ಸಿದ್ದರಾಮಯ್ಯ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಗರದಿಂದ ಕುಷ್ಟಗಿಗೆ ಖಾಸಗಿ ಕಾರ್ಯಕ್ರಮಕ್ಕೆ ಹೋಗಿ ಬರುವ ವೇಳೆ ತಾಲೂಕಿನ ಟಣಕನಕಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೋಡಿದ ಸಿಎಂ, ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರು. ಶಾಲೆಗೆ ತೆರಳಿ, ಶಾಲೆಯ ಆವರಣದಲ್ಲಿಯೇ ಮಕ್ಕಳನ್ನು ಕರೆಯಿಸಿ, ಶುಕ್ರವಾರ ಚರ್ಚೆ ನಡೆಸಿದರು.

ರಾಜಕೀಯ ಬೆಳವಣಿಗೆಗಳ ಮಧ್ಯೆಯೂ ಮುಖ್ಯಮಂತ್ರಿ ಮಕ್ಕಳೊಂದಿಗೆ ಕೆಲ ಹೊತ್ತು ನಿರುಮ್ಮಳವಾಗಿ ಕಳೆದರು. ನಿಮ್ಮ ಶಾಲೆಯಲ್ಲಿ ಏನು ಊಟ ಕೊಡುತ್ತಾರೆ? ಶಿಕ್ಷಕರ ಕೊರತೆ ಇದೆಯೇ? ಇದ್ದ ಶಿಕ್ಷಕರು ಸರಿಯಾಗಿ ಬೋಧನೆ ಮಾಡುತ್ತಾರೆಯೇ? ಎಂದು ಮಕ್ಕಳಿಗೆ ಪ್ರಶ್ನಿಸಿದರು. ನಮ್ಮ ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಮಕ್ಕಳು ಉತ್ತರಿಸಿದರು. ವಸತಿ ನಿಲಯದ ವಾತಾವರಣ ಹಾಗೂ ಸ್ವಚ್ಛತೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಮಕ್ಕಳಿಂದಲೇ ಹಿಂದಿನ ವರ್ಷಗಳ ಫಲಿತಾಂಶದ ಮಾಹಿತಿ ಯನ್ನು ಕುತೂಹಲದಿಂದ ಕೇಳಿದರು. ವಸತಿ ಶಾಲೆಯ ಸಂಪೂರ್ಣ ಫಲಿತಾಂಶ ಅತ್ಯುತ್ತ ಮವಾಗಿರುವುದರಿಂದ ಉತ್ತೇಜನಗೊಂಡ ಸಿಎಂ, ಹೈ-ಕ ಪ್ರದೇಶದಲ್ಲಿ ಇಂತಹ ಶಾಲೆಗಳನ್ನು ಹೆಚ್ಚು ನಿರ್ಮಿಸುವ ಅಗತ್ಯವಿದೆ ಎಂದರು.

ಜಿಲ್ಲೆಯಲ್ಲಿ 25 ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಂಡ ವೇಳೆ ನಾನಾ ವಸತಿ ಶಾಲೆಯ ಆವರಣದಲ್ಲಿ ಸಸಿ ನೆಡಲಾಗಿದೆ. ಪ್ರತಿಯೊಬ್ಬ ಮಕ್ಕಳು ಸ್ವಯಂ ಪ್ರೇರಿತರಾಗಿ, ಸಸಿಗಳನ್ನು ಬೆಳೆಸುತ್ತಿದ್ದಾರೆ. ತಾವೇ ಸಸಿಗೆ ನೀರು ಹಾಕುತ್ತಿದ್ದಾರೆ. ಅದರ ನೆರಳಿನಲ್ಲಿಯೇ ಓದುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದಾಗ, ಸಿಎಂ ಅಚ್ಚರಿ ವ್ಯಕ್ತಪಡಿಸಿದರು.

Write A Comment