ಯಲಹಂಕ: ಜಕ್ಕೂರು ಗ್ರಾಮದ ಅರ್ಕಾವತಿ ಬಡಾವಣೆ ಸಮೀಪ ಗುರುವಾರ ಮಧ್ಯಾಹ್ನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಶಾಲಾ ಬಸ್ ಉರುಳಿ ಬಿದ್ದಿದ್ದರಿಂದ ಆರು ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ.
ಅಳ್ಳಾಳಸಂದ್ರದ ವಿದ್ಯಾಶಿಲ್ಪ ಶಾಲೆ ವಿದ್ಯಾರ್ಥಿಗಳಾದ ಹಿತ (6), ನಿಹಾರಿಕಾ(7), ಅದ್ವೈತ್ (6) ಶ್ರೇಯಸ್ ಕೃಷ್ಣನ್ (11), ದಿವ್ಯಾ (6), ಆದಿತ್ಯ (5), ಸಹಾಯಕಿ (ಆಯಾ) ದೇವಿ (38) ಹಾಗೂ ಬಸ್ ಚಾಲಕ ವಿಜೇಂದ್ರ ಗಾಯಗೊಂಡವರು.
ಭಾಗೀರಥಿ ಟ್ರಾವೆಲ್್ಸಗೆ ಸೇರಿದ ಈ ಬಸ್ಸನ್ನು ವಿದ್ಯಾಶಿಲ್ಪ ಶಾಲೆಯವರು ಗುತ್ತಿಗೆ ಆಧಾರದ ಮೇಲೆ ಪಡೆದು, ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರುವ ಮತ್ತು ಮನೆಗೆ ಬಿಡುವ ಸೌಲಭ್ಯಕ್ಕಾಗಿ ಬಳಸುತ್ತಿದ್ದರು.
‘ಮಧ್ಯಾಹ್ನ 12 ಗಂಟೆಗೆ ತರಗತಿಗಳು ಮುಗಿದವು. ಆ ನಂತರ 20 ಮಕ್ಕಳನ್ನು ಬಸ್ನಲ್ಲಿ ಹತ್ತಿಸಿಕೊಂಡ ಚಾಲಕ, ಬಳ್ಳಾರಿ ಮುಖ್ಯರಸ್ತೆ ಮಾರ್ಗವಾಗಿ ಹೆಗ್ಗಡೆನಗರಕ್ಕೆ ಹೋಗುತ್ತಿದ್ದ. ಅರ್ಕಾವತಿ ಬಡಾವಣೆ ಸಮೀಪದ ಜೋಡಿರಸ್ತೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಕೆಲವೇ ಕ್ಷಣದಲ್ಲಿ ಮತ್ತೆ ವಿಭಜಕವನ್ನೇರಿ ಉರುಳಿ ಬಿದ್ದಿತು’ ಎಂದು ಆಯಾ ದೇವಿ ಹೇಳಿದರು.
ಬಸ್ ಉರುಳಿ ಬೀಳುತ್ತಿದ್ದಂತೆಯೇ ವಿಜೇಂದ್ರ, ದೇವಿ ಹಾಗೂ ಆರು ಮಕ್ಕಳಿಗೆ ತಲೆ, ಕೈ–ಕಾಲುಗಳಿಗೆ ಪೆಟ್ಟಾಯಿತು. ಅದೃಷ್ಟವಶಾತ್ ಉಳಿದ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು, ಮಕ್ಕಳನ್ನು ಬಸ್ನಿಂದ ಹೊರ ತಂದು ಸಮೀಪದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ಹೇಳಿದ್ದಾರೆ.
‘ಇದ್ದಕ್ಕಿದ್ದಂತೆ ದೊಡ್ಡದಾಗಿ ಶಬ್ದ ಕೇಳಿಸಿತು. ಗಾಬರಿಯಿಂದ ಸ್ಥಳಕ್ಕೆ ಓಡಿದೆ. ಉರುಳಿ ಬಿದ್ದಿದ್ದ ಬಸ್ನಿಂದ ಮಕ್ಕಳ ಚೀರಾಟ ಕೇಳಿಸುತ್ತಿತ್ತು. ಸಾರ್ವಜನಿಕರ ಸಹಾಯದಿಂದ ಬಸ್ನ ಗಾಜುಗಳನ್ನು ಒಡೆದು, ಮಕ್ಕಳನ್ನು ಹೊರ ತರಲಾಯಿತು’ ಎಂದು ಸಮೀಪದ ಹಾಲೋಬ್ರಿಕ್್ಸ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಶಫಿ ತಿಳಿಸಿದರು. ಬಸ್ ಚಾಲಕ ಎಸ್.ವಿಜೇಂದ್ರನನ್ನು ಯಲಹಂಕ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.