ಗೋಕಾಕ/ಬೆಂಗಳೂರು: ಖಾತೆ ಹಂಚಿಕೆಯೂ ಸೇರಿದಂತೆ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಫ್ಯಾಕ್ಸ್ ಮೂಲಕ ಮುಖ್ಯಮಂತ್ರಿ ಮತ್ತು ಕೆಪಿಸಿಸಿಗೆ ಅವರು ರಾಜೀನಾಮೆ ಪತ್ರ ರವಾನಿಸಿದ್ದಾರೆ. ಆದರೆ, ಮುಖ್ಯಮಂತ್ರಿಯೂ ಸೇರಿದಂತೆ ಯಾರೂ ಈ ಬಗ್ಗೆ ಈವರೆಗೆ ಅವರಿಗೆ ಪ್ರತಿಕ್ರಿಯೆ ನೀಡಿಲ್ಲ.
ಗೋಕಾಕದ ಗೃಹ ಕಚೇರಿ ‘ಹಿಲ್ ಗಾರ್ಡನ್’ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತೀಶ್, ‘ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪಕ್ಷ ಸಂಘಟನೆ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ನಿರ್ಧಾರಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ’ ಎಂದು ತಿಳಿಸಿದರು.
‘ರಾಜೀನಾಮೆ ಪತ್ರವನ್ನು ಮುಂಜಾನೆಯೇ ಮುಖ್ಯಮಂತ್ರಿಯವರ ಕಚೇರಿಗೆ ರವಾನಿಸಿದ್ದೇನೆ. ಅವರು ತಿರುಪತಿಗೆ ತೆರಳಿದ್ದರಿಂದಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ 20 ತಿಂಗಳು ಸಚಿವನಾಗಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ಸಂಪುಟದಲ್ಲಿ ಅಬಕಾರಿ ಸಚಿವ ಸ್ಥಾನ ನೀಡಿದಾಗಲೇ ಜನಪರ ಕಾರ್ಯನಿರ್ವಹಿಸಲು ಅವಕಾಶವಿರುವ ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿ ಅವರನ್ನು ನಾನು ಕೋರಿದ್ದೆ.
ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕು ಎಂದು ಯೋಚಿಸಿದ್ದೆ. ಈಗ ಸಮಯ ಕೂಡಿ ಬಂದಿದೆ. ಸಮಾಜ ಸೇವೆ ಮತ್ತು ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹರಿಸುತ್ತೇನೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮತ್ತು ಪಕ್ಷದ ಶ್ರೇಯಸ್ಸಿಗಾಗಿ ಕೆಲಸ ನಿರ್ವಹಿಸಬೇಕು ಎಂಬ ಬಯಕೆ ನನ್ನದು. ಇನ್ನು ಮುಂದೆಯೂ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದು, ಮುಖ್ಯಮಂತ್ರಿಗಳ ಜೊತೆಗೆ ಶಾಸಕನಾಗಿ ಈ ಅವಧಿಯನ್ನು ಪೂರೈಸುತ್ತೇನೆ’ ಎಂದರು.
ಭಿನ್ನಮತವಲ್ಲ: ‘ಇದು ಭಿನ್ನಮತವಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನ್ನ ಈ ರಾಜೀನಾಮೆ ಸರ್ಕಾರದ ಕಾರ್ಯವೈಖರಿ ವಿರುದ್ಧದ ಪ್ರತಿಭಟನೆ ಅಲ್ಲ. ಇದು ಪಕ್ಷದಲ್ಲಿನ ಯಾವುದೇ ಬೆಳವಣಿಗೆಗಳಿಗೂ ಪೂರಕವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ‘ಡಾ.ಜಿ. ಪರಮೇಶ್ವರ ಅವರ ಕೈ ಕೆಳಗೆ ಪಕ್ಷವನ್ನು ಸಂಘಟಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು ಉತ್ತರಿಸಿದರು.
ಮೊದಲಿನಿಂದಲೂ ಅಸಮಾಧಾನ: ದೀರ್ಘ ಕಾಲದಿಂದಲೂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸತೀಶ್ ಜಾರಕಿಹೊಳಿ, 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ತಮಗೆ ಅಬಕಾರಿ ಖಾತೆ ಹಂಚಿಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಆರಂಭದಿಂದಲೂ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಅವರು, ಇತ್ತೀಚೆಗೆ ಬಹಿರಂಗವಾಗಿ ಈ ಬಗ್ಗೆ ಬೇಡಿಕೆ ಹೊರಹಾಕಿದ್ದರು. ಜನರ ಜೊತೆ ನೇರವಾಗಿ ಸಂಪರ್ಕ ಇರುವ ಖಾತೆ ಬೇಕು ಎಂಬ ಇಂಗಿತ ಹೊರಹಾಕಿದ್ದ ಸತೀಶ್, ಸಮಾಜ ಕಲ್ಯಾಣ ಖಾತೆ ನೀಡುವಂತೆ ಬೇಡಿಕೆ ಇರಿಸಿದ್ದರು. ಅಬಕಾರಿ ಖಾತೆಯನ್ನು ಬದಲಿಸದಿದ್ದರೆ ಸಚಿವ ಸ್ಥಾನ ತೊರೆದು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು.
ಮುಖ್ಯಮಂತ್ರಿಯವರು ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದಾಗ ಅಬಕಾರಿ ಸಚಿವರು ದೂರ ಉಳಿದಿದ್ದರು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿದ್ದ ಅವರು, ಮುಖ್ಯಮಂತ್ರಿ ಜೊತೆ ಭಿನ್ನಾಭಿಪ್ರಾಯವಿಲ್ಲ ಎಂದಿದ್ದರು. ಆದರೆ, ಮಂಗಳವಾರ ಬೆಳಿಗ್ಗೆ ದಿಢೀರನೆ ರಾಜೀನಾಮೆ ಪತ್ರ ರವಾನಿಸಿದರು.
ಸಂಧಾನಯತ್ನ ವಿಫಲ: ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸತೀಶ್ ನಿರ್ಧರಿಸಿದ್ದರು. ಈ ಬಗ್ಗೆ ಸುಳಿವು ಪಡೆದ ಮುಖ್ಯಮಂತ್ರಿಯವರು ಅಧಿವೇಶನ ಆರಂಭಕ್ಕೂ ಕೆಲ ದಿನಗಳ ಮೊದಲು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಅಲ್ಲಿಗೆ ಕಳುಹಿಸಿ ಸಂಧಾನಕ್ಕೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಸಚಿವರು ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಲು ಮತ್ತೆ ಮುಂದಾಗಿರುವ ಕುರಿತು ಇತ್ತೀಚೆಗಷ್ಟೆ ಸಿದ್ದರಾಮಯ್ಯ ಅವರಿಗೆ ತಿಳಿದಿತ್ತು. ಆ ಬಳಿಕ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರ ಮೂಲಕ ಮನವೊಲಿಕೆಗೆ ಯತ್ನಿಸಿದ್ದರು. ಸಿದ್ದರಾಮಯ್ಯ ಅವರು ಮಾತುಕತೆಗೆ ಯತ್ನಿಸಿದರೂ ಸತೀಶ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಗೊತ್ತಾಗಿದೆ.
ಸಿ.ಎಂ ಮನವೊಲಿಕೆ ಯತ್ನ
ಸಿ.ಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಸತೀಶ್ ಅವರನ್ನು ಮಂಗಳವಾರ ರಾತ್ರಿ ಸಂಪರ್ಕಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಅವರ ಬೆಂಬಲಿಗರಿಗೂ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಮುನಿಸಿಗೆ ಹಲವು ಕಾರಣಗಳು
ಸಿದ್ದರಾಮಯ್ಯ ಅವರು ಜನತಾ ದಳದಲ್ಲಿ ಇದ್ದ ಕಾಲದಿಂದಲೂ ಆಪ್ತರಾಗಿದ್ದ ಸತೀಶ್ ಈಗ ಮುನಿಸಿಕೊಳ್ಳಲು ಹಲವು ಕಾರಣಗಳಿವೆ ಎಂಬುದು ಬಹಿರಂಗವಾಗುತ್ತಿದೆ.
‘ತಾವು ದೀರ್ಘಕಾಲ ಬೆಂಬಲಿಸಿದ ನಾಯಕ ಮುಖ್ಯಮಂತ್ರಿ ಆದರೂ ಸರ್ಕಾರದಲ್ಲಿ ತಮ್ಮ ಮಾತಿಗೆ ಬೆಲೆ ದೊರೆಯುತ್ತಿಲ್ಲ ಎಂಬ ಬೇಸರ ಸತೀಶ್ ಜಾರಕಿಹೊಳಿ ಅವರಿಗೆ ಇತ್ತು. ಮುಖ್ಯಮಂತ್ರಿಯವರ ಸುತ್ತ ಇರುವವರ ಬಗ್ಗೆ ಹಲವು ಸಂದರ್ಭಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಅಬಕಾರಿ ಸಚಿವರ ನಿಕಟವರ್ತಿಗಳು ಹೇಳುತ್ತಾರೆ.
ಲೋಕೋಪಯೋಗಿ ಸೇರಿ ಕೆಲವು ಇಲಾಖೆಗಳಲ್ಲಿ ತಮ್ಮ ಶಿಫಾರಸಿಗೆ ಬೆಲೆ ಕೊಡುತ್ತಿಲ್ಲ ಎಂದು ಸಚಿವರ ಎದುರಿನಲ್ಲೇ ಕೆಲ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಹಿಂದ ಚಳವಳಿ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ಬೆನ್ನಿಗೆ ನಿಂತ ತಮ್ಮನ್ನು ಮುಖ್ಯಮಂತ್ರಿಯವರು ಕಡೆಗಣಿಸುತ್ತಿದ್ದಾರೆಂದು ಸಿಟ್ಟಾಗಿದ್ದರು ಎನ್ನಲಾಗಿದೆ.