ಕರ್ನಾಟಕ

ಸರ್ಕಾರ ಸುಮ್ಮನಿರಬಾರದು: ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕುರಿತು ದೇವನೂರ ಅಭಿಮತ

Pinterest LinkedIn Tumblr

deva

ಮೈಸೂರು: ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಸಿಗಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆಯೆಂದು ರಾಜ್ಯ ಸರ್ಕಾರ ಕೈಚೆಲ್ಲಬಾರದು’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

ರಾಜ್ಯ ಸರ್ಕಾರ ಮನಸ್ಸು ಮಾಡಿ­ದರೆ ಹಲವು ಸಾಧ್ಯತೆಗಳಿವೆ. ಆ ಸಾಧ್ಯತೆ­ಗಳನ್ನು ಮಾಡದಿರಲು ಸುಪ್ರೀಂ ಕೋರ್ಟ್‌ ತೀರ್ಮಾನ ಕುರಿತು ಹೇಳುತ್ತ ಕೂತರೆ ತೊಡರುಗಾಲಾ­ಗುತ್ತದೆ. ಉದಾ­ಹ­ರಣೆಗೆ ಶಿಕ್ಷಣ ಹಕ್ಕು ಕಾಯ್ದೆ­ಯಲ್ಲಿ (ಆರ್‌ಟಿಇ) ಮಾತೃ­ಭಾಷೆಯೇ ಪ್ರಾಥಮಿಕ ಶಿಕ್ಷಣ ಆಗ­ಬೇಕು ಎಂದು ಹೇಳಿದೆ. ಆದರೆ, ಅದರಲ್ಲಿ ‘ಸಾಧ್ಯವಾ­ದಷ್ಟರ ಮಟ್ಟಿಗೆ’ ಎಂಬ ಪದವಿದ್ದು­ದರಿಂದ ಅಸ್ಪಷ್ಟತೆ ಇದೆ. ಇದಕ್ಕಾಗಿ ರಾಜ್ಯ ಸರ್ಕಾರ ಚರ್ಚಿಸಿ ‘ಸಾಧ್ಯವಾದ­ಷ್ಟರ ಮಟ್ಟಿಗೆ’ ಎಂಬ ಅಸ್ಪಷ್ಟತೆಯನ್ನು ಸ್ಪಷ್ಟಪಡಿಸ­ಬೇಕು. ಉದಾ­ಹ­­ರ­ಣೆಗೆ, ಮೈಸೂ­­ರಿನ ಶಾಲೆ­ಯೊಂ­ದ­ರಲ್ಲಿ ಹತ್ತು ತಮಿಳು ಮಕ್ಕಳಿ­ದ್ದರೆ ಪ್ರಾಥ­ಮಿಕ ಶಿಕ್ಷಣವನ್ನು ಕಲಿ­ಯಲು ಅವ­ರಿಗೆ ಹಕ್ಕಿದೆ. ಆದರೆ 10 ಮಕ್ಕಳಿರದಾಗ ಏನು ಮಾಡ­ಬೇಕು? ಅದರ ಕುರಿತು ತಿದ್ದುಪಡಿ ಮಾಡಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿ, ಅದನ್ನು ಅನುಷ್ಠಾನಕ್ಕೆ ತರಬೇಕು. ಹೀಗೆಯೇ ಆರೇಳು ಮನವಿಗಳ ಪಟ್ಟಿ­ಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವೆ ಎಂದು ಅವರು ಭಾನುವಾರ ಸುದ್ದಿಗಾರರಿಗೆ ವಿವರಿಸಿದರು.

ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕುರಿತು ಎಲ್ಲ ಚಳವಳಿಗಾರರು ಗೋಕಾಕ್‌ ಮಾದರಿ ಚಳವಳಿ ರೀತಿ ಆಗಬೇಕು ಎಂದು ಚರ್ಚಿಸುತ್ತಿದ್ದಾರೆ. ಇದನ್ನು ಬಿಡಬೇಕು. ಪ್ರಾಥಮಿಕ ಮಾಧ್ಯಮ ಶಿಕ್ಷಣ ಬೇರೆ, ಗೋಕಾಕ್‌ ಚಳವಳಿಯೇ ಬೇರೆ. ಗೋಕಾಕ್ ಚಳವಳಿಯು ಯಾವ ಭಾಷೆ­ಯಲ್ಲಿ ಮೊದಲು ಕಲಿಸಬೇಕು ಎಂಬ ಚರ್ಚೆ ನಡೆಸಿತು. ಈ ಚರ್ಚೆ­ಯಲ್ಲಿ ನಾವು ಭಾವನಾತ್ಮಕವಾಗಿ ಗುದ್ದಾಡು­ತ್ತೇವೆ. ಆದರೆ, ಮಾಧ್ಯಮಕ್ಕೆ ಬಂದಾಗ ಮೌನವಾಗುತ್ತೇವೆ. ಹೀಗಾ­ಗ­ಬಾರದು, ಒಂದು ಭಾಷಾ ಮಾಧ್ಯಮ ಎಂದರೆ, ಮರಕ್ಕೆ ಬೇರಿದ್ದ ಹಾಗೆ. ಎರಡು, ಮೂರನೆಯ ಭಾಷೆ­ಗಳು ಬಿಳಲು ಇದ್ದ ಹಾಗೆ. ಇದಕ್ಕಾಗಿ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಮಾಧ್ಯಮ­ವಾಗಿ ಕಲಿಸುವು­ದಾ­ದರೆ ಕನ್ನಡ ಮೂರ­ನೆಯ ಭಾಷೆ­ಯಾಗಲಿ, ಇಂಗ್ಲಿಷ್‌ ಮೊದಲ ಭಾಷೆ­ಯಾಗಲಿ, ಹಿಂದಿ ಎರಡನೆಯ ಭಾಷೆಯಾಗಲಿ ಪರವಾ­ಗಿಲ್ಲ. ಆದರೆ, ಮಾತೃಭಾಷೆಯಲ್ಲೇ ಶಿಕ್ಷಣ ಕಲಿಸು­ವಂ­ತಾಗಬೇಕು ಎಂದರು.

ಇದರೊಂದಿಗೆ ಆರ್‌ಟಿಇನಲ್ಲಿ ಇನ್ನೊಂದಿದೆ; ಸಾಮಾನ್ಯ ಶಾಲೆ ಅಥವಾ ಸಮೀಪ ಶಾಲೆ ಅಥವಾ ನೆರೆಹೊರೆ ಶಾಲೆ. ಇದನ್ನು ಕಟ್ಟು­ನಿಟ್ಟಾಗಿ ಸರ್ಕಾರ ಜಾರಿಗೆ ತಂದರೆ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು, ಅಧಿಕಾರಸ್ಥರ ಮಕ್ಕಳು ಒಂದೇ ಶಾಲೆಯಲ್ಲಿ ಓದಲು ಸಾಧ್ಯವಾ­ಗು–ತ್ತದೆ. ಜತೆಗೆ, ಎಲ್ಲ ವರ್ಗದ, ಎಲ್ಲ ಜಾತಿಯ ಹಾಗೂ ಎಲ್ಲ ಧರ್ಮಗಳ ಮಕ್ಕಳು ಒಂದೇ ಶಾಲೆಯಲ್ಲಿ ಓದಿದರೆ ದೊಡ್ಡ ಶಿಕ್ಷಣ ಸಿಕ್ಕಂತಾಗುತ್ತದೆ. ಇದಕ್ಕಾಗಿ ಈಗ ಇರುವ ಕಾನೂನಿನಲ್ಲೇ ರಾಜ್ಯ ಸರ್ಕಾರ ತಿದ್ದುಪಡಿ ಮಾಡ­ಬಹುದು ಎಂದು ಒತ್ತಾಯಿಸಿದರು.
ಒಂದನೇ ತರಗತಿಯಿಂದ 4ನೇ ತರಗತಿಯವರೆಗೆ ರಾಷ್ಟ್ರೀಕರಣ ಮಾಡಲು ಇರುವ ಸಾಧಕ, ಬಾಧಕಗಳ ಕುರಿತು ಚರ್ಚಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಧೈರ್ಯ ಮಾಡಿದರೆ ಕೆಲವು ಸಾಧ್ಯತೆ­ಗಳು ಜಾರಿಯಾಗಬಹುದು ಎಂದರು.

ಇದನ್ನು ಹೇಳಲು ಸಾಹಿತ್ಯ ಸಮ್ಮೇಳ­ನದ ಅಧ್ಯಕ್ಷನಾಗಬೇಕಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದರೆ ಇದನ್ನೇ ಪ್ರತಿಪಾದಿಸುತ್ತಿದ್ದೆ. ಇದನ್ನೇ ಅನೇಕರು ನನಗಿಂತ ಚೆನ್ನಾಗಿ ಹೇಳಿದ್ದಾರೆ. ಈಗ ಈ ಕುರಿತು ಚರ್ಚೆ­ಯಾಗುತ್ತಿದೆ. ಇದನ್ನು ಮುಂದುವರಿಸ­ಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Write A Comment