ಬೆಂಗಳೂರು: ನಾಯಂಡಹಳ್ಳಿ ಸಮೀಪದ ತಿಗಳರತೋಟದಲ್ಲಿ ಗುರುವಾರ ರಾತ್ರಿ ದೇವಿ (23) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮನೆ ಮಾಲೀಕರು ಹಾಗೂ ನೆರೆಮನೆಯ ಮಹಿಳೆಯರು ಮನೆಗೆ ನುಗ್ಗಿ ದಾಂದಲೆ ನಡೆಸಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮೃತರು ಪತ್ರ ಬರೆದಿಟ್ಟಿದ್ದಾರೆ.
ಘಟನೆ ಸಂಬಂಧ ಮೃತರ ತಾಯಿ ನಾಗಮ್ಮ ದೂರು ಕೊಟ್ಟಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮನೆಯೊಡತಿ ಸುಶೀಲಮ್ಮ, ಮಕ್ಕಳಾದ ರಾಜೇಶ್ವರಿ, ಮೀನಾಕ್ಷಿ, 16 ವರ್ಷದ ಮಗ ಹಾಗೂ ನೆರೆಮನೆಯ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಳಾದ ಮನೆ ಮಾಲೀಕ ಸುಬ್ರಮಣಿ, ಅವರ ಮಗ ಮಣಿಕಂಠ ಪರಾರಿಯಾಗಿದ್ದಾರೆ’ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದರು.
ಮೂಲತಃ ಬಿಡದಿ ಹೋಬಳಿ ವಾಜರಹಳ್ಳಿಯ ದೇವಿ, 7 ವರ್ಷಗಳ ಹಿಂದೆ ಕುಮಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ 3 ವರ್ಷದ ಉಲ್ಲಾಸ್ ಎಂಬ ಮಗನಿದ್ದಾನೆ. ಕುಮಾರ್ ಅವರು ಸ್ವಂತ ಲಾರಿ ಮತ್ತು ಟ್ರ್ಯಾಕ್ಟರ್ ಇಟ್ಟುಕೊಂಡಿದ್ದು, ಮರಳು ಸಾಗಾಣಿಕೆ ವ್ಯವಹಾರ ನಡೆಸುತ್ತಾರೆ. ಅವರಿಗೆ ಮಾತು ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಾಜರಹಳ್ಳಿಯಲ್ಲೇ ನೆಲೆಸಿದ್ದ ಈ ಕುಟುಂಬ, 10 ತಿಂಗಳ ಹಿಂದಷ್ಟೇ ಸುಬ್ರಮಣಿ ಅವರ ಮನೆಗೆ ಬಾಡಿಗೆ ಬಂದಿತ್ತು. ಈ ನಡುವೆ ಮಾಲೀಕರ ಮಗ ಮಣಿಕಂಠ, ದೇವಿ ಅವರ ಜತೆ ಹೆಚ್ಚು ಅನ್ಯೋನ್ಯವಾಗಿದ್ದ. ಇದರಿಂದಾಗಿ ಮಗ ಮತ್ತು ದೇವಿ ನಡುವೆ ಅನೈತಿಕ ಸಂಬಂಧ ಇದೆ ಎಂದು ಮಣಿಕಂಠನ ಪೋಷಕರು ಅನುಮಾನಿಸಲು ಆರಂಭಿಸಿದ್ದರು. ಇದೇ ವಿಚಾರವಾಗಿ ಅವರು ದೇವಿ ಜತೆ ಹಲವು ಬಾರಿ ಜಗಳ ಕೂಡ ಆಡಿದ್ದರು.
ಮಾಲೀಕರ ಕುಟುಂಬ ಗುರುವಾರ ಸಂಜೆಯೂ ನೆರೆಮನೆಯ ಇಬ್ಬರು ಮಹಿಳೆಯರ ಜತೆ ದೇವಿ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿತ್ತು. ಈ ವೇಳೆ ಅವರನ್ನು ಮನಬಂದಂತೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿತ್ತು. ಹೊರಗೆ ಹೋಗಿದ್ದ ದೇವಿ ಅವರ ತಾಯಿ ನಾಗಮ್ಮ, ಸಂಜೆ 6.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ದೇವಿ, ತಾಯಿ ಬಳಿ ಅಳಲು ತೋಡಿಕೊಂಡು ಅತ್ತಿದ್ದರು ಎನ್ನಲಾಗಿದೆ.
ರಾತ್ರಿ 7.30ಕ್ಕೆ ನಾಗಮ್ಮ, ಮೊಮ್ಮಗನನ್ನು ಕರೆದುಕೊಂಡು ಹಾಲು ತರಲು ಅಂಗಡಿಗೆ ಹೊರಟಿದ್ದರು. ಆಗ ಮಾಲೀಕರು ಮತ್ತೆ ಮನೆಗೆ ಬಂದು ಗಲಾಟೆ ಮಾಡಬಹುದು ಎಂಬ ಆತಂಕದಿಂದ ಮುಂಜಾಗ್ರತಾ ಕ್ರಮವಾಗಿ ಬೀಗ ಹಾಕಿಕೊಂಡು ಹೋಗಿದ್ದರು. ಈ ವೇಳೆ ದೇವಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
‘ನನ್ನ ವಿರುದ್ಧ ವಿನಾ ಕಾರಣ ಅನೈತಿಕ ಸಂಬಂಧದ ಆರೋಪ ಹೊರಿಸಲಾಗಿದೆ. ನನ್ನದಲ್ಲದ ತಪ್ಪಿಗೆ ಮಾಲೀಕರ ಕುಟುಂಬ ಹಾಗೂ ನೆರೆಮನೆಯ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ಸಾವಿಗೆ ಅವರೇ ಕಾರಣ’ ಎಂದು ದೇವಿ ಪತ್ರ ಬರೆದಿಟ್ಟಿದ್ದಾರೆ.
ಮತ್ತೊಂದು ಪ್ರಕರಣ
ಮೂಡಲಪಾಳ್ಯ ಸಮೀಪದ ಸಂಜೀವಿನಿನಗರ 9ನೇ ಅಡ್ಡರಸ್ತೆಯಲ್ಲಿ ಗುರುವಾರ ರಾತ್ರಿ ರಾಮ್ದಾಸ್ (45) ಎಂಬ ಆಟೊ ಚಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ 8.30ರ ಸುಮಾರಿಗೆ ಪತ್ನಿ–ಮಗ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.