ಶಿಡ್ಲಘಟ್ಟ: ತಾಲೂಕಿನ ಮುತ್ತೂರು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆಂದು ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಕುಟುಂಬ ವರ್ಗ, ಬಂಧುಗಳು ಹೆಣವನ್ನು ಅಲ್ಲಿಯೇ ಬಿಟ್ಟು ರಕ್ಷಣೆಗಾಗಿ ಓಡಿ ಹೋಗಬೇಕಾಯಿತು. ಫಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದರೆ, ಉಳಿದವರು ಗಂಟೆಗಳ ಕಾಲ ಕಾದು ಬಳಿಕ ಹೆಲ್ಮೆಟ್ ಹಾಕಿಕೊಂಡು ಶವ ಸಂಸ್ಕಾರ ನೆರವೇರಿಸಿದರು. ದಾಳಿಯಲ್ಲಿ ಮುತ್ತೂರು ಗ್ರಾಮದ ಮೂರ್ತೆಪ್ಪ (50) ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುತ್ತೂರು ಗ್ರಾಮದ ಶಿವಪ್ಪ (45) ಅವರ ಶವಸಂಸ್ಕಾರಕ್ಕೆ ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಎಲ್ಲ ಸಿದ್ದತೆ ಮುಗಿಸಿ, ಊದು ಬತ್ತಿ ಹಚ್ಚಿ ಅಂತಿಮ ನಮನ ಸಲ್ಲಿಸುತ್ತಿದ್ದಾಗ ಅಲ್ಲಿಯೇ ಇದ್ದ ಆಲದ ಮರದಲ್ಲಿದ್ದ ಜೇನು ನೊಣಗಳು ದಾಳಿ ಇಟ್ಟಿವೆ. ಇದರಿಂದ ಕಂಗಾಲಾದ ಮೃತನ ಸಂಬಂಧಿಕರು ತಪ್ಪಿಸಿಕೊಳ್ಳಲು ಅಲ್ಲಿಂದ ಪೇರಿ ಕೀಳಬೇಕಾಯಿತು. ಆಶ್ರಯ ಪಡೆಯಲು ಸುತ್ತಮುತ್ತ ಯಾವುದೇ ಮನೆಗಳು ಇಲ್ಲದೇ ಇದ್ದುದರಿಂದ ಕಚ್ಚಿಸಿಕೊಂಡ ಬಹುತೇಕ ಮಂದಿ ನೋವಿನಿಂದ ನರಳಾಡುವಂತಾಯಿತು. ಕೂಡಲೇ ಸ್ಥಳೀಯರು ಧಾವಿಸಿ ಬೈಕು, ಕಾರು ಇನ್ನಿತರ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಜೇನು ನೊಣಗಳ ಹಾವಳಿ ಕಡಿಮೆಯಾದ ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಶವ ಸಂಸ್ಕಾರ ನೆರವೇರಿಸಲಾಯಿತು.
ವೈದ್ಯರಿಲ್ಲದೆ ಪರದಾಟ: ಜೇನು ದಾಳಿಗೆ ಒಳಗಾದ ಸುಮಾರು 40 ಮಂದಿ ಒಟ್ಟಿಗೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅದೇ ವೇಳೆ ವೈದ್ಯರು ಊಟಕ್ಕೆ ತೆರಳಿದ್ದರು. ಹೀಗಾಗಿ ಮತ್ತೊಬ್ಬ ವೈದ್ಯರು ಬಂದು ಚಿಕಿತ್ಸೆ ನೀಡಿದರೂ, ಬಹುತೇಕ ಮಂದಿಗೆ ಸಕಾಲಕ್ಕೆ ಚಿಕಿತ್ಸೆ ದೊರಕದೆ ತೊಂದರೆಯಾಯಿತು.
—
ಚಿಕ್ಕ ಮಕ್ಕಳು, ಮುದುಕರು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಇದ್ದು ಬಹುತೇಕ ಎಲ್ಲರೂ ಗಾಯಗೊಂಡೆವು. ಹತ್ತಿರದಲ್ಲಿ ಯಾವುದೇ ಮನೆಗಳು ಇಲ್ಲದೇ ಇದ್ದುದರಿಂದ ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ- ನಾರಾಯಣಪ್ಪ, ಜೇಣು ನೊಣಗಳ ದಾಳಿಗೆ ತುತ್ತಾದವರು.