ಚಿಕ್ಕಮಗಳೂರು: ದತ್ತಮಾಲೆ ಅಭಿ ಯಾನ ಮತ್ತು ದತ್ತ ಜಯಂತಿ ಅಂಗವಾಗಿ ಶುಕ್ರವಾರ ನಗರದಲ್ಲಿ ಸಂಘ ಪರಿವಾರದ ನೇತೃತ್ವದಲ್ಲಿ ದತ್ತ ಮಾಲಾಧಾರಿಗಳು ಶಾಂತಿಯುತ ಶೋಭಾಯಾತ್ರೆ ನಡೆಸಿದರು.
ಕೇಸರಿ ಪಂಚೆ, ಕೇಸರಿ ಶಲ್ಯ ಧರಿಸಿದ್ದ ದತ್ತ ಮಾಲಾಧಾರಿಗಳು ಕೈಯಲ್ಲಿ ಭಗವಾಧ್ವಜ ಹಿಡಿದು, ದತ್ತಾತ್ರೇಯ ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಹೂವು ಮತ್ತು ಬಣ್ಣದ ವಿದ್ಯುತ್ ದೀಪದಿಂದ ಅಲಂಕರಿಸಿದ್ದ ವಾಹನದಲ್ಲಿ ದತ್ತಾತ್ರೇಯರ ಮೂರ್ತಿ ಮತ್ತು ಉತ್ಸವ ಮೂರ್ತಿ ಪ್ರತಿಷ್ಠಾಪಿಸ ಲಾಗಿತ್ತು. ದತ್ತಾತ್ರೇಯರ ಉತ್ಸವ ಮೂರ್ತಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಕ್ತಾದಿಗಳು ಹೂವು, ಹಣ್ಣು, ತೆಂಗಿನ ಕಾಯಿ, ಕರ್ಪೂರ ಅರ್ಪಿಸಿ, ಪೂಜೆ ಸಲ್ಲಿಸಿದರು.
ಕೇಸರಿ ಭಗವಾಧ್ವಜಗಳ ಹಾರಾಟ, ಕಿವಿಗಡಚಿಕ್ಕುವ ನಾಸಿಕ್ ಬ್ಯಾಂಡ್ಸೆಟ್ ನಿನಾದ, ದತ್ತಾತ್ರೇಯರ ಜಯಘೋಷ, ದೇವರ ಅಡ್ಡೆಗಳನ್ನು ಹೆಗಲಮೇಲೆ ಹೊತ್ತು ಅಮಿತೋತ್ಸಾಹದಲ್ಲಿ ಕುಣಿಯುವ ಯುವಕರ ಪಡೆ, ವಿವಿಧ ಜಾನಪದ ಕಲಾತಂಡಗಳ ನೃತ್ಯ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿತ್ತು.
ಕೇಸರಿ ಭಗವಾಧ್ವಜ, ಕೇಸರಿ ವರ್ಣದ ಬ್ಯಾನರ್, ಬಂಟಿಂಗ್ಸ್ಗಳಿಂದಾಗಿ ಶೋಭಾಯಾತ್ರೆ ಸಾಗಿದ ಮಾರ್ಗವಿಡಿ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಶೋಭಾಯಾತ್ರೆ ವೀಕ್ಷಿಸುತ್ತಿದ್ದರು. ಶೋಭಾಯಾತ್ರೆ ಕೊನೆಯಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಸಲಾಯಿತು.
ದತ್ತ ಜಯಂತಿಗೆ ಮುನ್ನಾ ದಿನ ನಡೆಯುವ ಶೋಭಾಯಾತ್ರೆಯಲ್ಲಿ ನಗರ ಸೇರಿದಂತೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಂಘ ಪರಿವಾರದ ಕಾರ್ಯಕರ್ತರು ಮತ್ತು ದತ್ತ ಮಾಲಾಧಾರಿಗಳು ಪಾಲ್ಗೊಂಡಿದ್ದರು.
ಹಿಂದೂಪರ ಸಂಘಟನೆಗಳ ಪ್ರಮುಖರು ಮತ್ತು ಶಾಸಕರಾದ ಸಿ.ಟಿ. ರವಿ, ವಿ.ಸುನೀಲ್ ಕುಮಾರ್, ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್, ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಸೇರಿದಂತೆ ವಿವಿಧ ಮಠಾಧೀಶರು ಶೋಭಾಯಾತ್ರೆಯ ಮುಂಚೂಣಿಯಲ್ಲಿದ್ದರು.
ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಶೋಭಾಯಾತ್ರೆ ಸಾಗಿದ ಮಾರ್ಗದಲ್ಲಿ ಮತ್ತು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಶೋಭಾಯಾತ್ರೆಗಾಗಿ ಮಧ್ಯಾಹ್ನ 3 ಗಂಟೆಯಿಂದ 7ಗಂಟೆವರೆಗೂ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಶೋಭಾಯಾತ್ರೆಯಲ್ಲಿ ಕಾಣಿಸದ ಸಂಸದೆ ಶೋಭಾ ಕರಾಂದ್ಲಾಜೆ ಧಾರ್ಮಿಕ ಸಭೆಯಲ್ಲಿ ಕಾಣಿಸಿಕೊಂಡರು.