ಬೆಂಗಳೂರು: ‘ನಾಡ ಬಾಂಧವರೇ, ನಾನು ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದೇನೆ. ಕರ್ನಾಟಕ ಸರ್ಕಾರದ ಮೊಬೈಲ್ ಆಡಳಿತವನ್ನು ನಾಡಿಗೆ ಸಮರ್ಪಿಸಲಾಗುತ್ತಿದೆ ಎಂದು ಪ್ರಕಟಿಸಲು ಹರ್ಷಿಸುತ್ತೇನೆ. ಭಾರತದ ಘನತವೆತ್ತ ರಾಷ್ಟ್ರಪತಿಗಳು ‘ಕರ್ನಾಟಕ ಮೊಬೈಲ್ಒನ್’ ಸೇವೆಯನ್ನು ಉದ್ಘಾಟಿಸಲು ಒಪ್ಪಿರುತ್ತಾರೆ…’
–ಇದು ಮುಖ್ಯಮಂತ್ರಿಗಳು ಯಾವುದೋ ಸಮಾರಂಭದಲ್ಲಿ ಮಾಡಿದ ಭಾಷಣ ಎಂದು ಭಾವಿಸಿದರೆ ಆ ಊಹೆ ತಪ್ಪು. ಬದಲಾಗಿ ‘ಮೊಬೈಲ್ಒನ್’ ಯೋಜನೆ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿರುವ ಸಿದ್ದರಾಮಯ್ಯ ಅವರ ಧ್ವನಿ ಇದು.
ಸೋಮವಾರ (ಡಿ.8) ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕಳಿಸಲಾಗಿರುವ ‘ಎಲೆಕ್ಟ್ರಾನಿಕ್ ಆಹ್ವಾನ ಪತ್ರ’ದಲ್ಲಿ ಸ್ವತಃ ಸಿ.ಎಂ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ರಾಜ್ಯದ ಜನರನ್ನು ಆಮಂತ್ರಿಸಿದ್ದಾರೆ. ಆಹ್ವಾನ ಪತ್ರಿಕೆಯ ಪುಟ ತೆಗೆಯುತ್ತಿದ್ದಂತೆ ಅವರ ಮುದ್ರಿತ ಧ್ವನಿ ಆಲಿಸಬಹುದು.
‘… ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿರುವ ‘ಕರ್ನಾಟಕ ಮೊಬೈಲ್ಒನ್’ ಯೋಜನೆಯಡಿ ಸರ್ಕಾರದ ಸೇವೆಗಳನ್ನು ನಿಮ್ಮ ಬೆರಳ ತುದಿಯಲ್ಲಿಯೇ ಪಡೆಯಲು ದಯಮಾಡಿ ಸಂಖ್ಯೆ 161ಕ್ಕೆ ಕರೆ ಮಾಡಿ. ಪ್ರಾರಂಭದಲ್ಲಿ ಸರ್ಕಾರಿ, ಖಾಸಗಿ ವಲಯದ ನಾಲ್ಕು ಸಾವಿರಕ್ಕೂ ಹೆಚ್ಚಿನ ಸೇವೆಗಳು ಈ ಯೋಜನೆಯಲ್ಲಿ ಸಾರ್ವಜನಿಕರಿಗೆ ಲಭ್ಯ. ಇನ್ನೂ ಅಧಿಕ ಸೇವೆಗಳು ಸದ್ಯದಲ್ಲಿಯೇ ಲಭ್ಯವಾಗಲಿವೆ. ಸರ್ಕಾರದ ಈ ಮಹತ್ವದ ಸಮಾರಂಭಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆಮಂತ್ರಿಸುತ್ತೇನೆ. ಈ ಕೂಡಲೇ 161ಕ್ಕೆ ಕರೆ ಮಾಡಿರಿ’ ಎಂಬ ಧ್ವನಿ ಕೇಳಬಹುದು.
ಏನಿದು ‘ಮೊಬೈಲ್ಒನ್’: ಸರ್ಕಾರ, ಖಾಸಗಿ ವಲಯದ ವಿವಿಧ ರೀತಿಯ ಸೇವೆಯನ್ನು ಮೊಬೈಲ್ ಮೂಲಕ ಅಂದರೆ ‘ಕರ್ನಾಟಕ ಮೊಬೈಲ್ಒನ್’ ಸೇವೆಯಡಿ ಪಡೆಯಬಹುದು. ಸರ್ಕಾರದ 37 ಇಲಾಖೆಗಳ 637 ಸೇವೆಗಳು ಮೊಬೈಲ್ ಮೂಲಕವೇ ಲಭ್ಯ. ಖಾಸಗಿ ಸಂಸ್ಥೆಗಳು ಕೂಡ 3500ಕ್ಕೂ ಹೆಚ್ಚು ಸೇವೆ ನೀಡುತ್ತಿದ್ದು, ಅವುಗಳಿಗೂ ಸರ್ಕಾರದ ಮೊಬೈಲ್ ಆ್ಯಪ್ನಲ್ಲಿ ವೇದಿಕೆ ಕಲ್ಪಿಸಲಾಗಿದೆ.
ಮನೆ ಅಥವಾ ನಿವೇಶನದ ಆಸ್ತಿ ತೆರಿಗೆಯಿಂದ ಹಿಡಿದು ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್ಗಳನ್ನೂ ಮೊಬೈಲ್ನಿಂದಲೇ ಪಾವತಿಸಬಹುದು. ಬಸ್ ಟಿಕೆಟ್ ಕಾಯ್ದಿರಿಸಬಹುದು. ಕಡತಗಳ ವಿಲೇವಾರಿ ಮೇಲ್ವಿಚಾರಣೆ, ಪಾಸ್ಪೋರ್ಟ್, ‘ಸಕಾಲ’ ಅರ್ಜಿಗಳ ವಿಲೇವಾರಿ ಕುರಿತ ಮಾಹಿತಿ ಕೂಡ ಮೊಬೈಲ್ನಿಂದಲೇ ಪಡೆಯಬಹುದು. ಮೊದಲ ಆರು ತಿಂಗಳು ಉಚಿತ ಸೇವೆ ಲಭ್ಯವಿರುತ್ತದೆ.