ರಾಯಚೂರು: ಜಿಲ್ಲೆಯ ಸೋಮನಮರಡಿ ಗ್ರಾಮದ ಹತ್ತಿರ ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯ 9ಎ ವಿತರಣಾ ನಾಲೆ ಮಂಗಳವಾರ ರಾತ್ರಿ ಒಡೆದಿದ್ದು, ನೂರಾರು ಎಕರೆ ಭತ್ತದ ಹೊಲಕ್ಕೆ ನೀರು ನುಗ್ಗಿ ಹಾನಿಯಾಗಿದೆ.
ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿರುವ ಈ ನಾಲೆಗೆ ಮಂಗಳವಾರ ರಾತ್ರಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ನೀರಿನ ಒತ್ತಡ ತಡೆಯದೇ ನಾಲೆಯ 3ನೇ ಕಿ.ಮೀ ಹತ್ತಿರದ 15 ಮೀಟರ್ ಲೈನಿಂಗ್ ನಾಲೆ ಒಡೆದಿದೆ.
ದೇವದುರ್ಗ, ಮಾನ್ವಿ ತಾಲ್ಲೂಕುಗಳ ನೀರಾವರಿ ವಂಚಿತ 45 ಹಳ್ಳಿಗಳ ಜಮೀನಿಗೆ ನಾರಾಯಣಪುರ ಬಲದಂಡೆ ನಾಲೆಯಿಂದಲೇ ಪರ್ಯಾಯವಾಗಿ ನೀರಾವರಿ ಕಲ್ಪಿಸಲು 150 ಕೋಟಿ ವೆಚ್ಚದಲ್ಲಿ 32 ಕಿ.ಮೀ ಉದ್ದದ ಈ ವಿಸ್ತರಣಾ ನಾಲೆ ನಿರ್ಮಿಸಲಾಗಿತ್ತು. 9–ಎ ಕಾಲುವೆ ವ್ಯಾಪ್ತಿಯಲ್ಲಿ ದೇವದುರ್ಗ ತಾಲ್ಲೂಕಿನ ಅರಕೇರಾ ಹಾಗೂ ಮಾನ್ವಿ ತಾಲ್ಲೂಕಿನ ವಡವಾಟಿ ನೀರಾವರಿ ಶಾಖೆ ರೂಪಗೊಂಡಿದ್ದು, ಡಿ.ವೈ. ಉಪ್ಪಾರ ಕಂಪೆನಿಗೆ ಕಾಮಗಾರಿ ವಹಿಸಿಕೊಡಲಾಗಿತ್ತು.
ಒಟ್ಟು 15,250 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ 5,500 ಹೆಕ್ಟೇರ್ ಪ್ರದೇಶವು ದೇವದುರ್ಗ ತಾಲ್ಲೂಕಿನ ಅರಕೇರಾ ಶಾಖೆ ವ್ಯಾಪ್ತಿಗೊಳಪಟ್ಟಿದ್ದು, 8,500 ಹೆಕ್ಟೇರ್ ಪ್ರದೇಶವು ಮಾನ್ವಿ ತಾಲ್ಲೂಕಿನ ವಡವಾಟಿ ಶಾಖೆ ವ್ಯಾಪ್ತಿಗೊಳಪಟ್ಟಿದೆ. ಅರಕೇರಾ ಶಾಖೆ ವ್ಯಾಪ್ತಿಯಲ್ಲಿ ಬರುವ ಸೋಮನಮರಡಿ ಸಮೀಪ 9–ಎ ನಾಲೆ ಮಂಗಳವಾರ ರಾತ್ರಿಯೇ ಒಡೆದು ನೂರಾರು ಎಕರೆಗೆ ಕಾಲುವೆ ನೀರು ನುಗ್ಗಿ ಅದ್ವಾನವಾಗಿದೆ.
ನಾರಾಯಣಪುರ ಬಲದಂಡೆ ನಾಲೆ, ತುಂಗಭದ್ರಾ ಎಡದಂಡೆ ನಾಲೆ ಪದೇ ಪದೇ ಒಡೆಯುವುದು ಹಿಂದೆ ಸಾಮಾನ್ಯವಾಗಿತ್ತು. ಒಂದೆರಡು ವರ್ಷದಿಂದ ಕಡಿಮೆ ಆಗಿದ್ದರೂ ಈಗ ಹೊಸ ನಾಲೆ ಪ್ರಾಯೋಗಿಕ ಪರೀಕ್ಷೆಯಲ್ಲೇ ಒಡೆದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
‘9–ಎ ನಾಲೆ ಕಾಂಕ್ರೀಟ್ ಲೈನಿಂಗ್ ಸರಿಯಾಗಿ ಹಾಕಿಲ್ಲ. ಕನಿಷ್ಠ 3 ಇಂಚು ಕಾಂಕ್ರೀಟ್ ಲೈನಿಂಗ್ ಹಾಕಬೇಕು. ಆದರೆ, ಗುತ್ತಿಗೆದಾರ 1 ಇಂಚು ಕಾಂಕ್ರೀಟ್ ಲೈನಿಂಗ್ ಹಾಕಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಈ ನಾಲೆ ಒಡೆಯಲು ಕಳಪೆ ಕಾಮಗಾರಿಯೇ ಕಾರಣ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರಿಂದ ನಷ್ಟದ ಹಣ ವಸೂಲಿ ಮಾಡಬೇಕು. ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದ್ದಾರೆ.