ಮಂಗಳೂರು, ಡಿ.4: ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 38 ಫಲಾನುಭವಿಗಳಿಗೆ 4.23 ಲಕ್ಷ ರೂ. ವೌಲ್ಯದ ಸವಲತ್ತುಗಳನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮನಪಾ ಮೇಯರ್ ಮಹಾಬಲ ಮಾರ್ಲ ವಿತರಿಸಿದರು.
ಈ ವೇಳೆ ಮಾತನಾಡಿದ ಮೇಯರ್, ಪೌರಾಡಳಿತ ನಿರ್ದೇ ಶನಾಲಯವು ಬೆಂಗಳೂರು ನಗರ ಬಡತನ ನಿರ್ಮೂಲನಾ ಕೋಶದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿ ರಿಸಲಾಗಿರುವ ಶೇ.3ರ ನಿಧಿಯಿಂದ ಸವಲತ್ತುಗಳನ್ನು ವಿತರಿ ಸಲಾಗಿದೆ. ಪಾಲಿಕೆಯು ಸಂಪೂರ್ಣ ನಿಧಿಯನ್ನು ಬಳಸಿ ಶೇ.100 ಸವಲತ್ತು ಗಳನ್ನು ವಿತರಿಸಿದೆ ಎಂದರು.
ಒಬ್ಬರಿಗೆ ವ್ಹೀಲ್ ಚೇರ್, ಒಬ್ಬರಿಗೆ ಶ್ರವಣ ಸಾಧನ, ಐವರಿಗೆ ಹೊಲಿಗೆ ಯಂತ್ರ, ಇಬ್ಬರಿಗೆ ಶೌಚಾಲಯ ನಿರ್ಮಾಣಕ್ಕೆ ತಲಾ 20 ಸಾವಿರ ರೂ. ನೆರವು, ನಾಲ್ವರಿಗೆ ತಲಾ 6 ಸಾವಿರ ರೂ.ಪೋಷಣಾ ಭತ್ತೆ ಮತ್ತು 15 ಮಂದಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಪತ್ರ ಹಾಗೂ ಒಬ್ಬರಿಗೆ ಸ್ವಉದ್ಯೋಗಕ್ಕಾಗಿ 50 ಸಾವಿರ ರೂ. ಸಹಾಯಧನ ನೀಡಲಾಯಿತು.
ಅತ್ತಾವರ ಅಂಧರ ಚಲನವಲನ ಕೇಂದ್ರ, ಸುರತ್ಕಲ್ನ ವಿಶೇಷ ಮಕ್ಕಳ ಶಾಲೆ ಸಹಿತ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು.
ಮನಪಾ ಪ್ರಭಾರ ಆಯುಕ್ತ ಗೋಕುಲ್ದಾಸ್ ನಾಯಕ್, ಉಪ ಮೇಯರ್ ಕವಿತಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಶೋಕ್ ಡಿ.ಕೆ., ಅಶೋಕ್ ಕುಮಾರ್ ಶೆಟ್ಟಿ, ಜೆಸಿಂತಾ, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ನಗರ ಬಡತನ ನಿರ್ಮೂಲನಾ ಕೋಶದ ಸಮುದಾಯ ಸಂಘಟನಾಧಿಕಾರಿ ಮಾಲಿನಿ ರೊಡ್ರಿಗಸ್, ಪೂರ್ಣಿಮಾ ಉಪಸ್ಥಿತರಿದ್ದರು.