ಬೆಂಗಳೂರು: ‘ಕಿಸ್ ಆಫ್ ಲವ್’ ಆಂದೋಲನದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ 6ನೇ ಎಸಿಎಂಎಂ ನ್ಯಾಯಾಲಯ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರಿಗೆ ಶನಿವಾರ ಸೂಚನೆ ನೀಡಿದೆ.
ಆಂದೋಲನ ನಡೆಸಲು ಅನುಮತಿ ನೀಡಬಾರದು ಎಂದು ಶ್ರೀರಾಮಸೇನೆ, ಹಿಂದೂ ಮಹಾಸಭಾ, ವಕೀಲ ಅಮೃತೇಶ್ ಸೇರಿದಂತೆ ವಿವಿಧ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆಂದೋಲನದ ಸಂಯೋಜಕರಾದ ರಚಿತಾ ತನೇಜಾ, ವಿಜಯನ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ನಗರ ಪೊಲೀಸ್ ಕಮಿಷನರ್ ಎಂ.ಎನ್.-ರೆಡ್ಡಿ ಅವರು, ‘ಕಿಸ್ ಆಫ್ ಲವ್’ಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಆದರೂ ಆಯೋಜಕರು ಆಂದೋಲನ ನಡೆಸಲು ಮುಂದಾಗಿದ್ದಾರೆ ಎಂದು ಅರ್ಜಿದಾರರು ಹೇಳಿದರು.
ಅನುಮತಿ ನೀಡದಿದ್ದರೂ ಆಂದೋಲನ ನಡೆಸುವುದು ಸರಿಯಲ್ಲ. ಅದನ್ನು ಮೀರಿ ಆಯೋಜಕರು ‘ಕಿಸ್ ಆಫ್ ಲವ್’ ಏರ್ಪಡಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಭಾನುವಾರ (ನ.30) ನಡೆಸಲು ಉದ್ದೇಶಿಸಲಾಗಿರುವ ಆಂದೋಲನವು ನಡೆಯಿತೇ, ಇಲ್ಲವೇ ಎಂಬುವುದರ ಬಗ್ಗೆ ಡಿ.3ರಂದು ವರದಿ ನೀಡುವಂತೆಯೂ ನ್ಯಾಯಾಲಯ ಹೇಳಿದೆ.