ಮಾಗಡಿ: ಪೊಲೀಸರ ದೌರ್ಜನ್ಯ ಖಂಡಿಸಿ ತಾಲ್ಲೂಕಿನ ಗೊರೂರು ಗ್ರಾಮಸ್ಥರು ಶನಿವಾರ ಸೋಲೂರು ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ರಸ್ತೆ ತಡೆ ನಡೆಸಿದರು.
ಐದಾರು ಸಾವಿರ ರೈತರು ಎರಡು ಗಂಟೆಗಳ ಕಾಲ ರಸ್ತೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪಿಸುವ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ತ್ಯಾಜ್ಯ ವಿಲೇವಾರಿ ಮಾಫಿಯಾಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕೈಜೋಡಿಸಿದ್ದು ಹಳ್ಳಿ ಜನರ ಬದುಕು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಗೌರವದಿಂದ ನಡೆದುಕೊಂಡು ರೈತರ ಜಮೀನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಅಷ್ಟೊಂದು ಇಚ್ಛಾಶಕ್ತಿ ಇದ್ದರೆ ಕನಕಪುರದಲ್ಲಿ ಕಸ ವಿಲೇವಾರಿ ಘಟಕವನ್ನು ಆರಂಭಿಸಲಿ ಎಂದರು.
ಪೊಲೀಸರಿಗೆ ತರಾಟೆ: ಮಠಾಧೀಶರು, ಅಮಾಯಕ ರೈತರ ಮೇಲೆ ಪೊಲೀಸರು ಪೌರುಷ ತೋರಿಸ್ತೀರಾ, ಹೆಣ್ಣುಮಕ್ಕಳನ್ನ ಅಟ್ಟಾಡಿಸಿಕೊಂಡು ಹೊಡೀತೀರಾ ಅವರ ಸ್ಥಾನದಲ್ಲಿ ನಿಮ್ಮ ಮನೆಯ ಹೆಣ್ಣುಮಕ್ಕಳಿದ್ದರೆ ಹಾಗೆಯೇ ಹೊಡೀತಿದ್ರಾ ನೀವು, ನೀವು ಸರ್ಕಾರದ, ಸಚಿವರ ಗುಲಾಮರಂತೆ ವರ್ತಿಸಬೇಡಿ ಎಂದು ಕುಮಾರಸ್ವಾಮಿ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸಭಾ ಅಧಿವೇಶನಕ್ಕೂ ಮುನ್ನ ಸರ್ವಪಕ್ಷದ ಮುಖಂಡರ ಸಭೆ ಕರೆದು ಮೊದಲು ಸರ್ಕಾರ ಮುಖ್ಯಮಂತ್ರಿಗಳು, ಸಚಿವರು ಚರ್ಚೆ ನಡೆಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಆಂಜನಮೂರ್ತಿ, ಸೋಲೂರು ಚಿಲುಮೆಮಠದ ಬಸವಲಿಂಗಸ್ವಾಮೀಜಿ, ಕಂಚುಗಲ್ ಬಂಡೇಮಠದ ಮಹಾಂತಸ್ವಾಮೀಜಿ, ಗುಡೇಮಾರನಹಳ್ಳಿ ಜಗಣ್ಣಯ್ಯ ಮಠದ ಚೆನ್ನಬಸವ ಸ್ವಾಮೀಜಿ, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ ಮೂರ್ತಿ, ಮಾಜಿ ಶಾಸಕ ನಾಗರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜಿ.ಪಂ ಮಾಜಿ ಸದಸ್ಯ ವೀರಪ್ಪ ಹಾಗೂ ಸೋಲೂರು ಹೋಬಳಿಯ ಯುವಕರು, ಮಹಿಳೆಯರು, ಕರ್ನಾಟಕ ಪ್ರಾಂತ
ರೈತ ಸಂಘದ ರಾಜ್ಯ ಪ್ರತಿನಿಧಿ ವನಜ, ನಾಗೇಶ್ ಹಾಗೂ ಗೊರೂರು, ಕನಕೇನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
………………………………………..
ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಗೊರೂರು ಗ್ರಾಮದ ಬಳಿ ಕಸ ಸಂಸ್ಕರಣ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವಜನಿಕರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರು ನಗರ ಘಟಕದ ಯುವ ಜನತಾದಳದ (ಜಾತ್ಯತೀತ) ಸದಸ್ಯರು ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಶನಿವಾರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು
ಬೆಂಗಳೂರು: ಗೊರೂರು ಗ್ರಾಮದ ಬಳಿ ಕಸವನ್ನು ಸಂಸ್ಕರಿಸುವ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿ ಬೆಂಗಳೂರು ನಗರ ಘಟಕದ ಯುವ ಜನತಾದಳದ (ಜಾತ್ಯತೀತ) ಸದಸ್ಯರು ಆನಂದರಾವ್ ವೃತ್ತದ ಗಾಂಧಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮುನ್ನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಆನಂದರಾವ್ ವೃತ್ತದವರೆಗೆ ಜಾಥಾ ನಡೆಸಿದರು.
ಯುವ ಜನತಾದಳದ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ ಮಾತನಾಡಿ, ‘ಗೊರೂರು ಗ್ರಾಮದ ಬಳಿ ಕಸ ಸಂಸ್ಕರಿಸುವ ಘಟಕ ಸ್ಥಾಪನೆಗೆ ಸಾರ್ವಜನಿಕರು, ರೈತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಇಂದು ಖಂಡನೀಯವಾಗಿದ್ದು ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಅಲ್ಲದೇ, ಕಸ ಸಂಸ್ಕರಣಾ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಘಟಕದಿಂದಾಗುವ ಸಾಧಕ ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಡದೆ ಏಕಾಏಕಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ದೂರಿದರು.