ಗುಂಡ್ಲುಪೇಟೆ: ಶಾಲೆಯಲ್ಲಿ ತಯಾರಿಸಬೇಕಿದ್ದ ಬಿಸಿಯೂಟವನ್ನು ಅಡುಗೆ ಸಹಾಯಕಿ ತನ್ನ ಮನೆಯಲ್ಲಿ ತಯಾರಿಸುತ್ತಿದ್ದ ವೇಳೆ ಪ್ರೆಷರ್ ಕುಕ್ಕರ್ ಸ್ಫೋಟಗೊಂಡು 6 ವಿದ್ಯಾರ್ಥಿಗಳೊಂದಿಗೆ ಆಕೆಯೂ ಗಾಯಗೊಂಡ ಘಟನೆ ತಾಲ್ಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗಾಯಗೊಂಡವರನ್ನು ಪಟ್ಟಣದ ಕೆ.ಎಸ್. ನಾಗರತ್ನಮ್ಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಗಳ ಕುಟುಂಬದವರಿಗೆ ಎಸ್ಡಬ್ಲುಎಫ್ ನಿಧಿಯಿಂದ ತಲಾ ₨ 5 ಸಾವಿರ, ಶಿಕ್ಷಕರ ಪತ್ತಿನ ಸಹಕಾರ ಸಂಘದಿಂದ ತಲಾ ₨ 5 ಸಾವಿರ ಪರಿಹಾರ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ತಿಳಿಸಿದ್ದಾರೆ.
ಗುಂಡ್ಲುಪೇಟೆ ಠಾಣೆಯ ಪಿಎಸ್ಐ ಎಂ.ಎಸ್. ರಾಜು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ತೆಂಕಲಹುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಅವರು ಶನಿವಾರ ಬೆಳಿಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯುತ್ತಿದ್ದ ಕಾರಣ ಶಿಕ್ಷಕರು ಶಾಲೆಯಿಂದ ತೆರಳಿದ್ದರು. ನಂತರ ತನ್ನ ಮನೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಿಸಲು ಸಹಾಯಕ್ಕೆಂದು 6 ವಿದ್ಯಾರ್ಥಿಗಳನ್ನು ಮಂಜುಳಾ ಕರೆದೊಯ್ದಿದ್ದರು. ಈ ವೇಳೆ ರೈಸ್ಬಾತ್ ತಯಾರಿಗೆಂದು ಪ್ರೆಷರ್ ಕುಕ್ಕರ್ನಲ್ಲಿ ನೀರು ಹಾಕಿಟ್ಟು ಟಿವಿ ವೀಕ್ಷಿಸುತ್ತಿದ್ದ ವೇಳೆ ಕುಕ್ಕರ್ ಸ್ಫೋಟಗೊಂಡು ಮಂಜುಳಾ ಮತ್ತು ವಿದ್ಯಾರ್ಥಿಗಳಾದ ಅನುಷಾ (ಮಂಜುಳಾ ಪುತ್ರಿ), ಜ್ಯೋತಿ, ಲಕ್ಷ್ಮೀ, ಪವನ್ಕುಮಾರ್, ಸುಚಿತ್ರಾ, ಐಶ್ವರ್ಯಾ ಅವರ ಮೇಲೆ ಕುದಿಯುತ್ತಿದ್ದ ನೀರು ಚೆಲ್ಲಿದೆ.