ಹಾಸನ: ಮಿದುಳು ರಕ್ತಸ್ರಾವದಿಂದ ಈಚೆಗೆ ಮೃತಪಟ್ಟ ಜಿಲ್ಲೆಯ ಸಾಲಗಾಮೆ ಗ್ರಾಮದ ಯೋಧ ಮಧುಸೂದನ್ (35) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮಧುಸೂದನ್ ಅವರು ಕೆಲವು ತಿಂಗಳಿಂದ ಪಂಜಾಬಿನ ಪಠಾಣ್ಕೋಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಅವರು ನಿಧನರಾಗಿದ್ದರು.
ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರಲಾಯಿತು. ಇಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಪ್ರೊಬೇಷನ್ ಐಎಎಸ್ ಅಧಿಕಾರಿ ವೆಂಕಟ್, ತಹಶೀಲ್ದಾರ್ ಮಂಜುನಾಥ್, ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಸ್ವಾಮಿ ಹಾಗೂ ಇತರರು ಮೃತದೇಹಕ್ಕೆ ಹೂಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.
ನಂತರ ಪಾರ್ಥಿವ ಶರೀರವನ್ನು ಯೋಧನ ಸ್ವಗ್ರಾಮ ಸಾಲಗಾಮೆಗೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಸೇನೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದ ಮಧುಸೂದನ್ಗೆ ತಂದೆ, ತಾಯಿ, ಪತ್ನಿ ಹಾಗೂ ಸಹೋದರ ಇದ್ದಾರೆ.