ಕರ್ನಾಟಕ

ನಿಗಮ-ಮಂಡಳಿ ಅಧ್ಯಕ್ಷರಿಗೆ ನಾಳೆ ಆದೇಶ ಪತ್ರ: -18 ತಿಂಗಳ ಅವಧಿಗೆ ಸೀಮಿತ; ಸಿದ್ದರಾಮಯ್ಯ

Pinterest LinkedIn Tumblr

Siddu111

ಬೆಂಗಳೂರು: ಹದಿನೆಂಟು ತಿಂಗಳ ಅವಧಿಗೆ ಮೊದಲ ಹಂತದಲ್ಲಿ ನಿಗಮ-ಮಂಡಳಿಗಳ ಆಧ್ಯಕ್ಷರ ನೇಮಕದ ಆದೇಶ ಪತ್ರವನ್ನು ಸೋಮವಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ”ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಊರಿಗೆ ಬಂದ ಪಟ್ಟಿ ಬೀದಿಗೆ ಬರದೇ ಇರುತ್ತದೆಯೇ,” ಎಂದು ಮಾಧ್ಯಮವರನ್ನೇ ಪ್ರಶ್ನಿಸಿದರು.

”ಪಟ್ಟಿ ಬಿಡುಗಡೆ ಮಾಡುವ ಅಗತ್ಯವಿಲ್ಲ. ಸೋಮವಾರದಂದು ನೇಮಕ ಆದೇಶವನ್ನು ನೀಡುತ್ತೇವೆ. ಎಲ್ಲಾ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಕೇವಲ 37 ತಿಂಗಳು ಬಾಕಿ ಇರುವುದರಿಂದ 18 ತಿಂಗಳ ಅವಧಿಗೆ ಸೀಮಿತಗೊಳಿಸಿ ಅಧ್ಯಕ್ಷರಿಗೆ ನೇಮಕದ ಆದೇಶವನ್ನು ನೀಡುತ್ತೇವೆ. ಉಳಿದ 18 ತಿಂಗಳ ಅವಧಿಗೆ ಮತ್ತೊಬ್ಬರಿಗೆ ಅವಕಾಶ ನೀಡಲು ತೀರ್ಮಾನಿಸಿದ್ದೇವೆ,” ಎಂದು ಹೇಳಿದರು.

”ಹೈಕಮಾಂಡ್ ಅನುಮೋದನೆ ನೀಡಿರುವ ಪಟ್ಟಿಯಲ್ಲಿದ್ದ ಎಲ್ಲರಿಗೂ ಒಂದೇ ಬಾರಿ ಆದೇಶ ನೀಡಲಾಗುತ್ತದೆ. ಮೊದಲ 18 ತಿಂಗಳಲ್ಲಿ ಅಧ್ಯಕ್ಷರಾಗುವವರ ಪಟ್ಟಿ ಮಾತ್ರ ಸಿದ್ಧಗೊಂಡಿದೆ. 10 ಸಾವಿರ ಅರ್ಜಿಗಳಲ್ಲಿ ಉಳಿದ ಅವಧಿಗೆ ಅಧ್ಯಕ್ಷರಾಗುವವರನ್ನು ಆಯ್ಕೆ ಮಾಡಲಾಗುವುದು,” ಎಂದು ಹೇಳಿದರು.

”85-90 ನಿಗಮ-ಮಂಡಳಿಗಳು ಇರುವುದರಿಂದ ಎಲ್ಲರಿಗೂ ಅಧ್ಯಕ್ಷ ಸ್ಥಾನ ನೀಡುವುದು ಕಷ್ಟ. 10 ಸಾವಿರ ಅರ್ಜಿಗಳು ಬಂದಿದ್ದವು. ಕಾಂಗ್ರೆಸ್ ಪಕ್ಷ 10 ವರ್ಷ ಅಧಿಕಾರದಲ್ಲಿ ಇರಲಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದವರು, ಕಾರ್ಯಕರ್ತರು ಎಲ್ಲರಿಗೂ ಸ್ಥಾನ ನೀಡಬೇಕಾಗಿದೆ. ಶಾಸಕರು, ಮಾಜಿ ಶಾಸಕರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಹೈಕಮಾಂಡ್ ಒಪ್ಪಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಹೇಳಿದರು.

”20:20 ಮ್ಯಾಚ್ ಆಡಲು ಕ್ರಿಕೆಟ್ ಅಲ್ಲ. ಟ್ವೆಂಟಿ ಟ್ವೆಂಟಿ ನಮಗೆ ಬೇಕಿಲ್ಲ. ಅದಕ್ಕಾಗಿ 18:18 ಆರಿಸಿಕೊಂಡಿದ್ದೇವೆ,” ಎಂಬ ಚಟಾಕಿಯನ್ನು ಹಾರಿಸಿದರು.

ರಾಜಕೀಯ ಪ್ರೇರಿತ
”ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಲು, ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಅವಕಾಶವಿದ್ದರೂ ಹೋರಾಟ ಮಾಡುವುದಾಗಿ ಹೇಳುತ್ತಿರುವ ಬಿಜೆಪಿ ನಾಯಕರಿಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರದ್ದು ರಾಜಕಾರಣ ಅಷ್ಟೆ. ಸದನದಲ್ಲಿ ಅವರು ಚರ್ಚೆ ಮಾಡಿದರೆ, ಪ್ರಶ್ನೆ ಮಾಡಿದರೆ ಉತ್ತರ ಕೊಡಲು ಸರಕಾರ ಸಿದ್ಧವಿದೆ,” ಎಂದು ಸಿದ್ದರಾಮಯ್ಯ ಹೇಳಿದರು.

”ವಿಧಾನಸಭೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂಬುದು ಪ್ರಜಾತಂತ್ರ ವಿರೋಧಿ. ಏನು ಹೇಳಬೇಕೋ ಅದನ್ನು ಅಲ್ಲಿಯೇ ಬಂದು ಹೇಳಲಿ. ಬೀದಿ ಹೋರಾಟ ಮಾಡುತ್ತೇವೆ, ಸಚಿವರಿಗೆ ಮಾತನಾಡಲು ಬಿಡುವುದಿಲ್ಲ ಎಂಬ ಮಾತುಗಳು ಅವರಿಗೆ ಸಂಸದೀಯ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿರುವುದನ್ನು ತೋರಿಸುತ್ತದೆ. ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಡಲಿ. ಹೀಗೆ ಹೋರಾಟ ಮಾಡುವುದರಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿ ಅವರಿದ್ದಾರೆ. ರಾಜ್ಯದ ಜನ ಅವರನ್ನು ತಿರಸ್ಕರಿಸಿದ್ದು, ಮತ್ತೆ ಅಧಿಕಾರಕ್ಕೆ ತರುವುದಿಲ್ಲ,” ಎಂದು ಹೇಳಿದರು.

”ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಮಹದೇವಪ್ರಸಾದ್ ಅವರು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಿಲ್ಲ. ಬಿಜೆಪಿಯವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದು, ಅದರಲ್ಲಿ ಸತ್ಯಾಂಶವಿಲ್ಲ,” ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಅಮಿತಾ ಪ್ರಸಾದ್‌ಗೆ ನೋಟಿಸ್
”ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದ ಅವ್ಯವಹಾರ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಅಮಿತಾ ಪ್ರಸಾದ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರ ಉತ್ತರ ಬಂದ ಮೇಲೆ ಲೋಕಾಯುಕ್ತ ತನಿಖೆಗೆ ವಹಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು,” ಎಂದು ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ”ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೀಡಿದ ವರದಿ ಆಧರಿಸಿ ಅಮಿತಾ ಪ್ರಸಾದ್‌ಗೆ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ,” ಎಂದರು.

Write A Comment