ಕರ್ನಾಟಕ

1,298 ಉಪನ್ಯಾಸಕರ ನೇಮಕ; ಕೆಇಎದಿಂದ ಪರೀಕ್ಷೆ, ಸಂದರ್ಶನವಿಲ್ಲ: ದೇಶಪಾಂಡೆ

Pinterest LinkedIn Tumblr

deshapande

ಬೆಂಗಳೂರು: ರಾಜ್ಯದ ಪ್ರಥಮ ದರ್ಜೆ ಪದವಿ ಕಾಲೇಜುಗಳಿಗೆ 1,298 ಉಪನ್ಯಾಸಕರನ್ನು ಸಿಇಟಿ ಮೂಲಕ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು ”ರಾಜ್ಯ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಈ ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನದ ಕ್ರಮ ಇರುವುದಿಲ್ಲ. ಈ ನಿಟ್ಟಿನಲ್ಲಿ ಕೆಇಎ ಸಿದ್ಧತೆ ಕೈಗೊಳ್ಳುತ್ತಿದೆ. ಮುಂದಿನ ಹಂತದಲ್ಲಿ ಮತ್ತೆ 856 ಉಪನ್ಯಾಸಕರ ನೇಮಕಕ್ಕೂ ಹಣಕಾಸು ಇಲಾಖೆಯಿಂದ ಸಮ್ಮತಿ ಸಿಕ್ಕಿದೆ,” ಎಂದರು.

”ಅನುದಾನಿತ ಕಾಲೇಜುಗಳಲ್ಲಿ ಸಂಗ್ರಹಿಸಿದ ಶುಲ್ಕವನ್ನು ಪೂರ್ಣವಾಗಿ ಸರಕಾರಕ್ಕೆ ಪಾವತಿಸುವ ಕ್ರಮ ಈವರೆಗೆ ಇತ್ತು. ಕಾಲೇಜುಗಳ ಮನವಿ ಮೇರೆಗೆ ಶೇ.50ರಷ್ಟು ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಪ್ರಥಮ ದರ್ಜೆ ಕಾಲೇಜುಗಳ 5 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿ ಪ್ರಮಾಣಪತ್ರ ಕೊಡಲಾಗಿದೆ. ಪದವಿ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ದೊರಕಿಸಿ ಕೊಡಲು ಉತ್ತೇಜನ ನೀಡಲಾಗುತ್ತಿದೆ. ಉದ್ಯೋಗಾವಕಾಶ ಹೆಚ್ಚಿಸುವ ದೃಷ್ಟಿಯಿಂದ ಪ್ರತ್ಯೇಕ ಕೋರ್ಸ್ ಆರಂಭಿಸಲಾಗುತ್ತಿದೆ,” ಎಂದು ಹೇಳಿದರು.

ಸ್ಮಾರ್ಟ್ ಕ್ಲಾಸ್
”ಉಪನ್ಯಾಸಕರ ಕೊರತೆ ಹಿನ್ನೆಲೆಯಲ್ಲಿ ತಜ್ಞರಿಂದ ಪಾಠ ಮಾಡಿಸಿ ಅದರ ವಿಡಿಯೊ ರೆಕಾರ್ಡಿಂಗ್ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ಪ್ರಾಯೋಗಿಕವಾಗಿ 50 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಇ-ಪಠ್ಯಾಂಶ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಒದಗಿಸಲಾಗುತ್ತಿದೆ. ನಂತರ ಅದನ್ನು ವಿದ್ಯಾರ್ಥಿಗಳ ಮೊಬೈಲ್ ಹ್ಯಾಂಡ್‌ಸೆಟ್‌ಗೆ ಸಂಪರ್ಕ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. 100 ಕಾಲೇಜುಗಳಲ್ಲಿ ವೈರ್‌ಲೆಸ್ ಲೋಕಲ್ ಏರಿಯಾ ನೆಟ್‌ವರ್ಕ್ ಸ್ಥಾಪಿಸಲಾಗುತ್ತಿದೆ,” ಎಂದು ತಿಳಿಸಿದರು.

”ತಾಂತ್ರಿಕ ಶಿಕ್ಷಣದ ಮೂಲಸೌಕರ್ಯಕ್ಕೆ ಕೆಇಎದಿಂದ 36.18 ಕೋಟಿ ರೂ. ಕೊಡಿಸಲಾಗುತ್ತಿದೆ. ಮೈಸೂರು ವಿವಿ ಶತಮಾನೋತ್ಸವ ಸಮಾರಂಭಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು,” ಎಂದು ಸಚಿವರು ತಿಳಿಸಿದರು.

ವರದಿ ನೋಡಿ ಕ್ರಮ
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು) ಅಕ್ರಮಕ್ಕೆ ಸಂಬಂಧಿಸಿ ಕೃಷ್ಣರಾವ್ ಸಮಿತಿ ನೀಡಿರುವ ವರದಿಯ ಅಧ್ಯಯನ ಕೈಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಿಇಟಿಯಲ್ಲಿ ಕಳೆದ ವರ್ಷ ನಡೆದ ಅಕ್ರಮದ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ನಂತರ ಸೂಕ್ತ ಕ್ರಮವಾಗಲಿದೆ. ಬೆಂಗಳೂರು ವಿವಿ ವಿಭಜನೆ ಕುರಿತು ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ದೇಶಪಾಂಡೆ ಪ್ರತಿಕ್ರಿಯೆ ನೀಡಿದರು.

Write A Comment