ಕರ್ನಾಟಕ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ನಟ ವಿಜಯ್

Pinterest LinkedIn Tumblr

duniya

ಬೆಂಗಳೂರು: ನಟ ದುನಿಯಾ ವಿಜಯ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ನಟ ವಿಜಯ್ ಸಾಕಷ್ಟು ಹೊತ್ತು ಚರ್ಚಿಸಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿಜಯ್, ‘ನಮ್ಮ ಕುಟುಂಬ ಒಂದಾದ ಹಿನ್ನಲೆಯಲ್ಲಿ ಸಂತಸ ಹಂಚಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಿದ್ದೆ. ನಾನು ಮತ್ತು ನನ್ನ ಪತ್ನಿ ಒಂದಾದ ವಿಚಾರ ಕೇಳಿ ಸಿದ್ದರಾಮಯ್ಯ ಅವರು ಕೂಡ ಸಂತಸ ವ್ಯಕ್ತಪಡಿಸಿದರು’ ಎಂದು ಹೇಳಿದರು.

ಇನ್ನು ತಮ್ಮ ಮತ್ತು ಪೊಲೀಸ್ ಅಧಿಕಾರಿ ಡಿಸಿಪಿ ದೇವರಾಜ್ ಅವರ ನಡುವಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಜಯ್, ‘ನಾನು ದೇವರಾಜ್ ಅವರ ವಿರುದ್ಧ ದೂರು ನೀಡಲು ಇಲ್ಲಿಗೆ ಬಂದಿಲ್ಲ. ಕೇವಲ ನನ್ನ ಕುಟುಂಬ ಒಂದಾದ ಹಿನ್ನಲೆಯಲ್ಲಿ ಸಂತಸ ಹಂಚಿಕೊಳ್ಳಲು ಮಾತ್ರ ಆಗಮಿಸಿದ್ದೆ. ನಾನು ಯಾರಿಗೂ ಹೆದರುವ ಪ್ರಮೇಯವೇ ಇಲ್ಲ. ಕರಿ ಚಿರತೆ ಯಾರಿಗೂ ಹೆದರುವುದಿಲ್ಲ. ಕರಿ ಚಿರತೆ ಕರಿ ಚರತೆಯಾಗಿಯೇ ಇರುತ್ತದೆ’ ಎಂದು ಹೇಳಿದರು.

ಇನ್ನು ಡಿಸಿಪಿ ದೇವರಾಜ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ ನಟ ವಿಜಯ್, ‘ಆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಈ ಹಿಂದೆ ಕೌಟುಂಬಿಕ ಕಲಹ ಮತ್ತು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ನಟ ವಿಜಯ್ ಮತ್ತು ಅವರ ಪತ್ನಿ ನಾಗರತ್ನ ಅವರಿಗೆ ಇತ್ತೀಚೆಗೆ ಕೌಟುಂಬಿಕ ನ್ಯಾಯಾಲಯ ಬುದ್ದಿವಾದ ಹೇಳಿತ್ತು. ಬಳಿಕ ನಟ ವಿಜಯ್ ತಮ್ಮ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆಯಲು ಮುಂದಾಗಿದ್ದರು. ಅಲ್ಲದೆ ತಮ್ಮ ಕುಟುಂಬದಲ್ಲಿನ ಕಲಹಕ್ಕೆ ಪೊಲೀಸ್ ಅಧಿಕಾರಿ ಡಿಸಿಪಿ ದೇವರಾಜ್ ಅವರೇ ಕಾರಣ ಎಂದು ವಿಜಯ್ ಆರೋಪಿಸಿದ್ದರು.

Write A Comment