ಬೆಂಗಳೂರು: ಈಗಷ್ಟೇ ಬೆಂಗಳೂರಿನಲ್ಲಿ ಕಡಲೆ ಕಾಯಿ ಪರಿಷೆ ಮುಗಿದಿದೆ. ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭವಾಗಲಿದೆ. ಉತ್ಸವ ನಗರಿ ಬೆಂಗಳೂರಿಗೆ ಇವೆರಡರ ಮಧ್ಯೆ ಈಗ ರಾಷ್ಟ್ರೀಯ ಪುಸ್ತಕ ಮೇಳ.
ಬಿ ಇ ಎಲ್ ಕರ್ನಾಟಕ ಕಾರ್ಮಿಕರ ಹಿತರಕ್ಷಕ ಸಮಿತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಆಯೋಜಿಸುತ್ತಿರುವ ಬೃಹತ್ ರಾಷ್ಟ್ರೀಯ ಪುಸ್ತಕ ಮೇಳ ಬಿ ಇ ಎಲ್ ಮೈದಾನದಲ್ಲಿ ೨೨ ನವೆಂಬರ್ ನಿಂದ ೩೦ ನವೆಂಬರ್ ವರೆಗೆ ನಡೆಯಲಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮತ್ತು ಸುತ್ತಮುತ್ತ ಕ್ಷೀಣಿಸುತ್ತಿರುವ ಕನ್ನಡ ವಾತಾವರಣವನ್ನು ಮತ್ತೆ ಸೃಷ್ಟಿಸಲು ಮತ್ತು ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವಂತಹ ಕನ್ನಡ ಪುಸ್ತಕ ಮಳಿಗೆಗಳೆ ಹೆಚ್ಚು ಸಂಖ್ಯೆಯಲ್ಲಿರುವ ರಾಷ್ಟ್ರೀಯ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಾಹಿತಿ, ಬಿ ಇ ಎಲ್ ಕರ್ನಾಟಕ ಹಿತರಕ್ಷಕ ಸಮಿತಿಯ ಅಧ್ಯಕ್ಷ ಪ್ರೊ ಎಸ್ ಜಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ, ತಮಿಳು, ತೆಲುಗು, ಇಂಗ್ಲಿಶ್, ಗುಜರಾತಿ, ಮಲಯಾಳಂ ಭಾಷೆಗಳ ಪುಸ್ತಕಗಳು ಪ್ರದರ್ಶನಗೊಳ್ಳಲ್ಲಿದ್ದು, ರಿಯಾಯಿತಿ ದರದಲ್ಲಿ ಗ್ರಾಹಕರು ಪುಸ್ತಕಗಳನ್ನು ಕೊಳ್ಳಬಹುದಾಗಿದೆ. ೧೫೦ ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿದ್ದು, ೧ ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸದರು.
ಪ್ರದರ್ಶನಕ್ಕೆ ಪ್ರವೇಶ ಉಚಿತವಿದ್ದು, ಪ್ರತಿ ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
೨೨-೧೧-೧೪ ರಂದು ೧೧ ಘಂಟೆಗೆ ಸಚಿವೆ ಉಮಾಶ್ರೀ ಮತ್ತು ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕೃತವಾಗಿ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ.