ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಐದು ತಿಂಗಳಿನಿಂದ ರೇಲ್ವೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರ ಖಾತೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ಭಾನುವಾರ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ಸದಾನಂದಗೌಡ ಅವರು ರೇಲ್ವೆ ಖಾತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಗೌಡರನ್ನು ಸಂಪುಟದಲ್ಲೇ ಉಳಿಸಿಕೊಳ್ಳುವ ಸಲುವಾಗಿ ಅವರಿಗೆ ಬೇರೆ ಯಾವುದಾದರೂ ಬೇರೆ ಖಾತೆ ನೀಡುವ ಸಂಭವವಿದೆ.
ಮೂಲಗಳ ಪ್ರಕಾರ, ಶಿವಸೇನೆ ಮುಖಂಡ ಸುರೇಶ್ ಪ್ರಭುರವರನ್ನೇ ರೇಲ್ವೆ ಸಚಿವರನ್ನಾಗಿ ಮಾಡಲಾಗುತ್ತದೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ಅವರಿಗೆ ಬಹುಮುಖ್ಯವಾದ ರಕ್ಷಣಾ ಖಾತೆ ವಹಿಸುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕದ ಮತ್ತೊಬ್ಬ ಮುಖಂಡ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ಕುಮಾರ್ ಅವರ ಸ್ಥಾನ ಏನಾಗಬಹುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ರಸಗೊಬ್ಬರ ಖಾತೆಯಲ್ಲೇ ಮುಂದುವರಿಸುವ ನಿರೀಕ್ಷೆ ಇದೆ. ಇದೇ ವೇಳೆ, ಮುಕ್ತಾರ್ ಅಬ್ಬಾಸ್ ನಖ್ವಿ, ಅನುರಾಗ್ ಠಾಕೂರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.