ಕರಾವಳಿ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದ ಯುವಕನ ಬಂಧನ

Pinterest LinkedIn Tumblr

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಯನ್ನು‌ ಚುಂಬಿಸಿದ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಮಧುಸೂದನ್‌ ರೆಡ್ಡಿ(25) ಬಂಧಿತ ಆರೋಪಿ. ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ವಿಜಯನಗರದಲ್ಲಿ ನೆಲೆಸಿದ್ದ.

ಪ್ರತಿಷ್ಠಿತ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ತಲೆಕೆಡಿಸಿಕೊಳ್ಳದ ಯುವತಿ ನಿದ್ದೆಗೆ ಜಾರಿದ್ದಳು. ಸೆ.13ರ ಬೆಳಗಿನ ಜಾವ ಟಿ.ದಾಸರಹಳ್ಳಿ ಬಳಿ ಬಸ್‌ ಬಂದಾಗ ಮಲಗಿದ್ದ ಯುವತಿ ಚುಂಬಿಸಿದ್ದ. ಎಚ್ಚರಗೊಂಡ ಯುವತಿ ಮುತ್ತು ಕೊಟ್ಟವರು ಯಾರು ಎಂದು ನೋಡವಷ್ಟರಲ್ಲೇ ಯುವಕ ಬಸ್‌ನಿಂದ ಇಳಿದು ಪರಾರಿಯಾಗಿದ್ದ.

ನೊಂದ ಯುವತಿ, ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೀಣ್ಯ ಠಾಣೆ ಪೊಲೀಸರು ಬಾಗಲಗುಂಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಬಾಗಲಗುಂಟೆ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದದ್ದು ಪೊಲೀಸರು, ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಯಾರೆಲ್ಲ ಹತ್ತಿದ್ದರು ಎಂಬುದರ ಬಗ್ಗೆ ಸಿಸಿ ಕ್ಯಾಮೆರಾ ಮತ್ತು ಬಸ್‌ ಟಿಕೆಟ್‌ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಯುವತಿ ಸಹ ಗುರುತು ಹಿಡಿದಿದ್ದರು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಳ್ಳಾರಿಯಿಂದ ಹೊರಟ ಬಸ್ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಬಸ್‌ ಟಿ. ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌ ಮಧ್ಯೆ ಸಂಚರಿಸುವಾಗ ಕಾಮುಕ ಆಕೆಯ ಸೀಟಿನ ಬಳಿ ಹೋಗಿ ಯುವಕ ಆಕೆಗೆ ಕಿಸ್ ಕೊಟ್ಟು ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ತೆಲಗು ನಟ ವಿಜಯ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತಾ-ಗೋವಿಂದಂ’ ಸಿನಿಮಾ ಮಾದರಿಯಲ್ಲಿ ಈ ಘಟನೆ ನಡೆದಿತ್ತೆಂದು ವಿಮರ್ಶಿಸಲಾಗಿತ್ತು.

Comments are closed.