ಕರಾವಳಿ

ರಾಜ್ಯ ಸರ್ಕಾರದೊಂದಿಗೆ ಟೊಯೊಟಾ ಮೋಟಾರ್ಸ್ ಕಂಪನಿ ಒಡಂಬಡಿಕೆ

Pinterest LinkedIn Tumblr

ಉಡುಪಿ: ಉಡುಪಿಯ ಕೊಳಲಗಿರಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ ತರಬೇತಿ ನೀಡುವ ಸಂಬಂಧ ಜಪಾನಿನ ಟೊಯೊಟಾ ಮೋಟಾರ್ಸ್ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಒಡಂಬಡಿಕೆ ಮಾಡಿಕೊಂಡಿತು.

ಒಡಂಬಡಿಕೆಗೆ ಸಹಿ ಹಾಕಿದ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಮಾತನಾಡಿ, ತರಬೇತಿಗಳಿಂದ ವಿದ್ಯಾರ್ಥಿಗಳ ಕೌಶಲಮಟ್ಟ ಮತ್ತು ಉದ್ಯೋಗಾವಾಕಾಶಗಳು ಹೆಚ್ಚಾಗಲಿವೆ. ಇನ್ನಷ್ಟು ಕೇಂದ್ರಗಳಲ್ಲಿ ಟೊಯೊಟಾ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ಉಪಾಧ್ಯಕ್ಷ ಜಿ. ಶಂಕರ ಉಪಸ್ಥಿತರಿದ್ದರು.

ಈ ಒಪ್ಪಂದದ ಅನ್ವಯ ಟೊಯೊಟಾ ಕಂಪನಿಯು ಜಿಟಿಟಿಸಿಯಲ್ಲಿನ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್‌ಗಳಲ್ಲಿ 3 ವರ್ಷಗಳ ವೃತ್ತಿಪರ ತರಬೇತಿ ನೀಡಲಿದೆ. ಫೆಬ್ರವರಿಯಿಂದ ಉಡುಪಿಯ ಜಿಟಿಟಿಸಿ ಕೇಂದ್ರದಲ್ಲಿ ಟೊಯೊಟಾ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭವಾಗಲಿದ್ದು, ಕೋರ್ಸ್ನ ಅಂತ್ಯದಲ್ಲಿ ಟೊಯೊಟಾ ಮತ್ತು ಜಿಟಿಟಿಸಿ ಜಂಟಿಯಾಗಿ ಪರೀಕ್ಷೆ ನಡೆಸಲಿವೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರತಿಷ್ಟಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಲು ಸಹಯೋಗ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ ಸಂಯೋಜಕ ಮಂಜುನಾಥ ನಾಯಕ್ ತಿಳಿಸಿದ್ದಾರೆ.

Comments are closed.