ಕರಾವಳಿ

ಬೈಕ್ ಮೇಲೆ ಜಿಂಕೆಗಳು ಹಾರಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

Pinterest LinkedIn Tumblr

ಕುಂದಾಪುರ: ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕಿನ ಮೇಲೆ ಎರಡು ಜಿಂಕೆಗಳು ಹಾರಿದ್ದು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಎರಡು ವಾರ ಚಿಕಿತ್ಸೆ ಪಡೆದಿದ್ದ ವ್ಯಕ್ತಿ ಡಿಶ್ಚಾರ್ಜ್ ಅಗಿ ಮನೆಗೆ ಬಂದ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ.
ರಾಮ (22) ಮೃತ ದುರ್ದೈವಿ.

2020 ಡಿ. 28 ರಂದು ಈ ಘಟನೆ ನಡೆದಿತ್ತು. ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಜಂಬೂರು ಕ್ರಾಸ್ ಬಳಿಯಲ್ಲಿ ಕಾರ್ಜಳ್ಳಿ ಕಡೆಗೆ ರಾಮ ಅವರು ತನ್ನ ಬೈಕಿನಲ್ಲಿ ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಸ್ತೆಯ ಬಲ ಬದಿಯ ಹಾಡಿಯಿಂದ ಕೊಂಬಿರುವ ಎರಡು ಜಿಂಕೆಗಳು ಒಮ್ಮೆಲೆ ಬೈಕ್ ಸವಾರಿ ಮಾಡಿಕೊಂಡಿದ್ದ ರಾಮ ಅವರ ಮೇಲೆ ಹಾರಿ ಬಿದ್ದಿದ್ದು, ಬೈಕ್ ಸಮೇತ ರಾಮ ರಸ್ತೆಗೆ ಬಿದ್ದಿದ್ದರು. ಕೂಡಲೇ ಸಮೀಪದಲ್ಲಿದ್ದ ಶೇಖರ ಎನ್ನುವರು ಓಡಿ ಹೋಗಿ ನೋಡಿದಾಗ ರಾಮರವರ ಕುತ್ತಿಗೆಯಲ್ಲಿ ಜಿಂಕೆಯ ಕೊಂಬು ತಾಗಿ ತೀವೃ ಸ್ವರೂಪದ ಗಾಯ ಆಗಿದ್ದು, ಮೂಗಿಗೆ ಹಾಗೂ ಬಲ ಕೈಗೆ ಗುದ್ದಿದ ಒಳ ಗಾಯ, ಕಾಲುಗಳಲ್ಲಿ ಪರಚಿದ ಗಾಯಗಳಾಗಿತ್ತು. ಸ್ಥಳಿಯರೊಂದಿಗೆ ಆತನನ್ನು ಉಪಚರಿಸಿ ಅಂಬುಲೆನ್ಸ್ ಮೂಲಕ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಅವರು ಎರಡು ದಿನದ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ವಾಪಾಸ್ಸಾಗಿದ್ದರು.

ಮನೆಗೆ ಬಂದ ಅವರಿಗೆ ವಿಪರೀತ ಕೆಮ್ಮು ಪ್ರಾರಂಭವಾಗಿದ್ದು, ಚಿಕಿತ್ಸೆಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರಿಶೀಲಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.