ಕರಾವಳಿ

ಗ್ರಾಮಪಂಚಾಯತ್ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂತೆ, ಜಾತ್ರೆ ನಿಷೇಧ

Pinterest LinkedIn Tumblr

ಉಡುಪಿ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 22 ಮತ್ತು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು, ಮತದಾನದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಜಿಲ್ಲೆಯ ಈ ಕೆಳಕಂಡ ತಾಲೂಕಿನ ಚುನಾವಣೆ ನಡೆಯಲಿರುವ ಗ್ರಾಮಪಂಚಾಯತ್‌ನ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಚುನಾವಣೆ ನಡೆಯುವ ದಿನಗಳಂದು ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್ 22 ರ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಬೈಂದೂರು ತಾಲೂಕು ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪುಂದ ಗ್ರಾಮದ ವಾರದ ಸಂತೆ, ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದ್ದೂರಿನಲ್ಲಿ ನಡೆಯುವ ಸಂತೆ, ಉಪ್ಪೂರು ಗ್ರಾಮ ಪಂಚಾಯತ್‌ನ ಕೊಳಲಗಿರಿ ಪ್ರದೇಶದಲ್ಲಿ ನಡೆಯುವ ಸಂತೆ ಹಾಗೂ ಹೆಬ್ರಿ ತಾಲೂಕು ಕುಚ್ಚೂರು ಗ್ರಾಮ ಪಂಚಾಯತ್‌ನ ಬೇಳಂಜೆ ಗ್ರಾಮದಲ್ಲಿ ನಡೆಯುವ ಮಾರಿ ಜಾತ್ರೆಯನ್ನು ನಿಷೇಧಿಸಲಾಗಿದೆ.

ಡಿಸೆಂಬರ್ 27 ರ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲಿ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಗಂಗಾಧರೇಶ್ವರ ದೇವಸ್ಥಾನದ ಜಾತ್ರೆ, ನೀರೆ ಗ್ರಾಮ ಪಂಚಾಯತ್‌ನ ಕಣಜಾರು ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೆ ಹಾಗೂ ಕಾಪು ತಾಲೂಕು ಇನ್ನಂಜೆ ಗ್ರಾಮ ಪಂಚಾಯತ್‌ನ ಪಾಂಗಾಳ ಗ್ರಾಮದ ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.