ಕುಂದಾಪುರ: ಬಿಲ್ಲವ- ಮುಸ್ಲೀಂ ಸಮಾವೇಶವನ್ನು ಈಗ ತಾತ್ಕಾಲಿಕವಾಗಿ ಮುಂದೂಡಿದ್ದು ಈ ಸಮಾವೇಶ ಎಂದಿಗೂ ನಡೆಯಬಾರದು. ಈ ಸಮಾವೇಶ ನಡೆಯದೇ ಇರಲು ಬಿಲ್ಲವ ಸಮುದಾಯ ಜಾಗೃತವಾಗಿರುವದೇ ಕಾರಣ. ಮುಸ್ಲೀಮ್ ಹಾಗೂ ಬಿಲ್ಲವರ ನಡುವೆ ಸಾಂಸ್ಕೃತಿಕ, ಜೀವನ ಪದ್ದತಿ, ಸಂಸ್ಕೃತಿಯ ನಡುವೆ ಹೊಂದಾಣೆಕೆಯೇ ಇಲ್ಲದಿದ್ದರೂ ಸಮಾಜೋತ್ಸವ ಮಾಡುವ ಮೂಲಕ ಬಿಲ್ಲವ ಸಮಾಜ ಒಗ್ಗಟ್ಟು ಮುರಿಯಲಾಗುತ್ತದೆ……..ಹೀಗೆ ಆರೋಪಿಸಿದವರು ಬಿಲ್ಲವ ಸಮಾಜ ಹಿರಿಯ ಮುಖಂಡ ಅಚ್ಯುತ್ ಅಮೀನ್ ಕಲ್ಮಾಡಿ.
ಕುಂದಾಪುರ ಬಿಲ್ಲವ ಜಾಗೃತಿ ವೇದಿಕೆ ಆಶ್ರಯದಲ್ಲಿ ಹೋಟೆಲ್ ಪಾರಿಜಾತ ಮಿನಿ ಸಂಭಾಂಗಣದಲ್ಲಿ ಗುರುವಾರ ನಡೆದ ಬಿಲ್ಲವ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯತೆ, ರಾಷ್ಟ್ರನೀತಿ, ರಾಷ್ಟ್ರಭಕ್ತಿ ಇರುವ ಎಲ್ಲಾ ಸಮಾಜದವರ ಜೊತೆ ಬೇಕಾದರೆ ಸಮಾವೇಶ ಮಾಡಲಿ, ಬಿಲ್ಲವ ಮುಸ್ಲೀಮ್ ಸಮಾಜೋತ್ಸವ ಮಾಡುವ ಹಟಕ್ಕೆ ಬಿದ್ದರೆ ಬಾರೀ ದೊಟ್ಟಮಟ್ಟದ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
ರಾಷ್ಟ್ರೀಯತೆ ಧರ್ಮ, ರಾಷ್ಟ್ರಭಕ್ತಿ ಸಾಮರಸ್ಯ ಬದುಕು ಕಟ್ಟಿಕೊಂಡವರ ಜೊತೆ ಸಾಂಸ್ಕೃತಿಕ ವಿನಿಮಯ ತಪ್ಪಲ್ಲ. ನಮ್ಮ ಆಚರಣೆ, ಸಂಪ್ರದಾಯ, ಜೀವನ ಪದ್ದತಿ ಜೊತೆ ಹೊಂದಾಣಿಕೆಯೇ ಇಲ್ಲದ ಸಮಾಜದ ಜೊತೆ ಸಮಾವೇಶಕ್ಕೆ ಅರ್ಥವೇ ಇಲ್ಲ. ಸಮಾವೇಶವು ದೊಡ್ಡದೊಂದು ಕುತಂತ್ರವಾಗಿದ್ದು, ಬಿಲ್ಲವ ಸಮಾಜ ಒಡೆಯುವ ಇರಾದೆ ಇದರಲ್ಲಿದೆ. ಸಮಾವೇಶದ ಮೂಲಕ ಬಿಲ್ಲವ ಸಮಾಜ ಎರಡು ಬಣವಾಗಿ ಒಡೆದು ಹೋಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಅತೀ ಹೆಚ್ಚು ಬಿಲ್ಲವ ಸಮಾಜದವರ ಮತಾಂತರ ಮಾಡಲಾಗಿದ್ದು, ಬಿಲ್ಲವ ಸಮಾಜ ಒಗ್ಗಟ್ಟಾಗಿ ಮತಾಂತರ ಪಿಡುಗು ಮಟ್ಟಹಾಕಲು ಮುಂದಾಗಬೇಕು ಎಂದ ಅವರು, ಬಿಲ್ಲವ ಸಮಾಜವನ್ನು ಪವರ್ಗ ೧ಕ್ಕೆ ತರುವ ಮೂಲಕ ಬಿಲ್ಲವ ವಿದ್ಯಾರ್ಥಿಗಳ ನೆರವಿಗೆ ಬರಬೇಕಾದ ಪ್ರಯತ್ನ ಮಾಡಬೇಕಿದೆ. ಸಮಾಜದಲ್ಲಿ ಜಾತಿಗಳ ನಡುವೆ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕೇ ವಿನಹ ಒಡೆಯುವ ಕೆಲಸ ಮಾಡಬಾರದು ಎಂದು ಅವರು ಸಲಹೆ ನೀಡಿದರು.
ಬಿಲ್ಲವ ಮುಖಂಡರಾದ ಸತೀಶ್ ಪೂಜಾರಿ ವಕ್ವಾಡಿ, ಭಾಸ್ಕರ ಬಿಲ್ಲವ, ಗಿರೀಶ್ ಕುಂದಾಪುರ, ಗುಣರತ್ನಾ, ಜಾನಕಿ ಬಿಲ್ಲವ,ಕುಂದಾಪುರ ಪುರಸಭೆ ಸದಸ್ಯರಾದ ಪ್ರೇಮಲತಾ, ವನಿತಾ ಎಸ್ ಬಿಲ್ಲವ, ಶೇಖರ ಪೂಜಾರಿ ಮೊದಲಾದವರಿದ್ದರು. ರಾಜೇಶ್ ಕಡ್ಗಿಮನೆ ನಿರೂಪಿಸಿದರು. ಗಣೇಶ್ ಪೂಜಾರಿ ವಿಠಲವಾಡಿ ವಂದಿಸಿದರು.
ಮುಸ್ಲೀಮ್ ಬಿಲ್ಲವ ಸಮಾಜೋತ್ಸವ ಮೂಲಕ ಬಿಲ್ಲವ ಸಮಾಜಕ್ಕೆ ಬೆಂಕಿ ಇಡುವ ಕೆಲಸ ಮಾಡಬಾರದು. ಸಮಾವೇಶ ಮಾಡಲೇಬೇಕು ಅಂತರಿದ್ದರೆ ಎಲ್ಲಾ ಸಮಾಜದವರೊಂದಿಗೆ ಮಾಡಲಿ. ಒಂದೊಮ್ಮೆ ಬಿಲ್ಲವ ಮುಸ್ಲೀಮ್ ಸಮಾವೇಶ ಮಾಡಿದರೆ ೨ ಸಾವಿರಕ್ಕೂ ಮಿಕ್ಕ ಬಿಲ್ಲವ ಸಮಾಜದ ಜನ ಸಮಾವೇಶ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ.
– ಭಾಸ್ಕರ ಬಿಲ್ಲವ ಹೇರಿಕಿದ್ರು, ಕುಂದಾಪುರ ತಾಪಂ ಮಾಜಿ ಅಧ್ಯಕ್ಷ.
Comments are closed.