ಕರಾವಳಿ

ಕಡಿಮೆ ಬಂಡವಾಳದಲ್ಲಿ ಲಾಭದಾಯಕ ಮೀನು ಕೃಷಿ ಮಾಡುವ ವಿಧಾನದ ಬಗ್ಗೆ ಮೀನು ಕೃಷಿ ತರಬೇತಿ

Pinterest LinkedIn Tumblr

ಮಂಗಳೂರು : ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಲಾಭದಾಯಕ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ|| ಎನ್. ಚೇತನ್ ರೈತರೊಂದಿಗೆ ಸಮಾಲೋಚಿಸುತ್ತಾ ನೀರು ಸಂಗ್ರಹಣೆ ಮಾಡಲು ಸಿದ್ಧಗೊಳಿಸಿರುವ ಕೃಷಿಹೊಂಡಗಳು, ಕೆರೆ, ಕೊಳಗಳು ಹಾಗು ಮೀನುಗಾರಿಕೆಗಾಗಿ ರಚಿಸಲಾದ ಹೊಂಡಗಳಲ್ಲಿ ಕಡಿಮೆ ಬಂಡವಾಳದೊಂದಿಗೆ ಲಾಭದಾಯಕ ಮೀನು ಕೃಷಿ ಮಾಡುವ ವಿಧಾನಗಳನ್ನು ತಿಳಿಸಿಕೊಟ್ಟರು.

ಇಂತಹ ನೀರು ಶೇಖರಿಸಿದ ಹೊಂಡಗಳು 8 ರಿಂದ 9 ತಿಂಗಳುಗಳವರೆಗೆ ನೀರಿರುವಾದಲ್ಲಿ ಹೆಚ್ಚು ಸೂಕ್ತವಾಗುತ್ತದೆ ಹಾಗು ಮೀನು ಮರಿಗಳನ್ನು ಶೇಖರಿಸುವ ಮುನ್ನ ಹೊಂಡಗಳಲ್ಲಿನ ಕಳೆ, ಕಪ್ಪೆಗಳನ್ನು ತೆಗೆದು, ಸೂಕ್ತ ಮೀನಿನ ತಳಿಗಳು, ಅದಕ್ಕೆ ಬೇಕಾದ ಅಹಾರ, ಹೊಂಡಗಳ ತಯಾರಿ, ನಿರ್ವಹಣೆ, ರೋಗಮುಕ್ತ ವತಾವರಣದ ಸೃಷ್ಟಿ ಇತ್ಯಾದಿ ಮಾಹಿತಿಯನ್ನು ತಿಳಿಸಿಕೊಟ್ಟರು. ಮಳೆಗಾಲದಲ್ಲಿ ರೈತರಿಗೆ ಕೇಂದ್ರದ ವತಿಯಿಂದ ಆರೋಗ್ಯವಾದ ಹಾಗೂ ವತಾವರಣದ ವೆತ್ಯಾಸಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರುವ ಸಿಹಿನೀರು ಮೀನು ಮರಿಗಳನ್ನು ವಿತರಿಸಲಾಗುವುದು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಡಾ|| ಟಿ. ಜೆ. ರಮೇಶ್ ಮಾತನಾಡುತ್ತ, ಸಮಗ್ರ ಕೃಷಿ ಪದ್ದತಿಯಲ್ಲಿ ವಿವಿಧ ಬಗೆಯ ಬೆಳೆಗಳನ್ನು ಕಡಿಮೆ ಪ್ರದೇಶದಲ್ಲಿ ಬೆಳೆಯುವುದರಿಂದ ಹೆಚ್ಚು ಅದಾಯವನ್ನು ಹೇಗೆ ಪಡೆಯಬಹುದು ಹಾಗು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ದಿಹೊಂದುವ ಮಾಹಿತಿಯನ್ನು ತಿಳಿಸಿಕೊಟ್ಟರು.

ವಿವಿಧ ಬೆಳೆಗಳಿಗೆ ನೀರನ್ನು ಬಳಸುವ ಸಲುವಾಗಿ ಮೀಸಲಿಟ್ಟ ನೀರಿರುವ ಪ್ರದೇಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೀನು ಕೃಷಿ ಮಾಡುವ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಅಜ್ಜಾವರ ಹಾಗು ಸುತ್ತಮುತ್ತಲಿನ ಗ್ರಾಮದ 51 ರೈತರು ಸಕ್ರಿಯವಾಗಿ ಪಾಲ್ಗೊಂಡು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಸೊಕ್ತ ಮಾಹಿತಿಯನ್ನು ಪಡೆದರು.

Comments are closed.