ಕರಾವಳಿ

ಸಂಪನ್ಮೂಲಗಳ ಮಿತ ಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ: ನ್ಯಾಯಮೂರ್ತಿ ಸಿ.ಎಂ. ಜೋಷಿ

Pinterest LinkedIn Tumblr

ಉಡುಪಿ: ಪ್ರಕೃತಿಯಲ್ಲಿರುವ ಎಲ್ಲಾ ಬಗೆಯ ಸಂಪನ್ಮೂಲಗಳನ್ನು , ಮಿತವಾಗಿ ಬಳಸುವುದರ ಮೂಲಕ, ಮಾನವರು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ತಿಳಿಸಿದ್ದಾರೆ.

ಅವರು ಬುಧವಾರ, ಪಡುಬಿದ್ರೆಯ, ರಮೇಶ್ ಮಹಾಬಲ ಶೆಟ್ಟಿ ಸಭಾ ಭವನದಲ್ಲಿ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ , ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಖೆ, ಪ್ರವಾಸೋದ್ಯಮ ಇಲಖೆ, ಕರಾವಳಿ ನಿಯಂತ್ರಣ ಪ್ರಾಧಿಕಾರ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕøತಿಯಲ್ಲಿ ದೈನಂದಿನ ಜೀವನದಲ್ಲಿ ಪರಿಸರದ ಉಪಯೋಗ ಮತ್ತು ಸಂಪನ್ಮೂಲಗಳ ಮಿತ ಬಳಕೆಯ ಬಗ್ಗೆ ಕಾಣಬಹುದಾಗಿದೆ, ನಮ್ಮ ಅವಶ್ಯಕತೆಗನುಗುಣವಾಗಿ ಮಾತ್ರ ಸಂಪನ್ಮೂನಗಳನ್ನು ಬಳಸಬೇಕು, ಪ್ರಾಕೃತಿಕ ಸಂಪನ್ಮೂಲಗಳನ್ನು ಐಶಾರಾಮಿ ಜೀವನಕ್ಕೆ ಬಳಸಲು ಮಾನವನಿಗೆ ಯಾವುದೇ ಅಧಿಕಾರವಿಲ್ಲ , ಪರಿಸರದ ಜೊತೆ ಕೊಳ್ಳುಬಾಕತನ ನಡೆಸಬಾರದು ಎಂದ ಜಿಲ್ಲಾ ನ್ಯಾಯಾಧೀಶರು, ಪರಿಸರದಿಂದ ಪ್ರಯೋಜನ ಪಡೆದ ಮೇಲೆ ಪರಿಸರಕ್ಕೆ ಏನಾದರೂ ಕೂಡುಗೆ ನೀಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು, ಪರಿಸರದಲ್ಲಿ ತ್ಯಾಜ್ಯ ಹರಡುವ ಮೂಲಕ ಪರಿಸರ ಮಾಲಿನ್ಯ ಮಾಡಬಾರದು, ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು ಎಂದರು.

ಪರಿಸರ ಸಂರಕ್ಷಣೆಯ ದೃಷ್ಠಿಯಿಂದ ಉಡುಪಿ ಜಿಲ್ಲಾಡಳಿತ ಕೈಗೊಂಡಿರುವ, ವಾರದಲ್ಲಿ ಒಂದು ದಿನ ಸಮೂಹ ಸಾರಿಗೆ ಬಳಕೆ , ವಾರದಲ್ಲಿ ಒಂದು ದಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಸಿ ಬಳಕೆ ನಿಷೇಧ ಕ್ರಮಗಳು ಸ್ವಾಗತಾರ್ಹ, ಪರಿಸರದಲ್ಲಿ ಪ್ಲಾಸ್ಟಿಕ್ ಹರಡದಿರುವ ಬಗ್ಗೆ, ಮತ್ತು ಸಭೆ ಸಮಾರಂಭಗಳಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ತ್ಯಾಜ್ಯ ಸೃಷ್ಠಿಸುವುದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದು ನ್ಯಾ. ಜೋಷಿ ಹೇಳಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಕಾವೇರಿ, ಕಾಪು ತಹಸೀಲ್ದಾರ್ ರಶ್ಮಿ, ಡಿಡಿಪಿಐ ಶೇಷಶಯನ ಕಾರಿಂಜ, ಸಿಆರ್ಝಡ್ ಪ್ರಾದೇಶಿಕ ನಿರ್ದೇಶಕ ರಮೇಶ್ ಬಾಬು, ಉಡುಪಿ ಬಿಎಓ ಮಂಜುಳಾ, ಪಡುಬಿದ್ರೆಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಬ್ಬಣ್ಣ, ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವಾ ಉಪಸ್ಥಿತರಿದ್ದರು.

ಜಿಲ್ಲಾ ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಹಾಯಕ ಪರಿಸರ ಅಧಿಕಾರಿ ಊರ್ಮಿಳಾ ಸ್ವಾಗತಿಸಿದರು,ದೀಪಾ ಉಡುಪ ನಿರೂಪಿಸಿದರು.

ಪರಿಸರ ದಿನಾಚರಣೆ ಪ್ರಯುಕ್ತ ಹೆಜಮಾಡಿ ಟೋಲ್ ನಿಂದ ಪರಿಸರ ಜಾಥಾ ಕಾರ್ಯಕ್ರಮ ನಡೆಯಿತು. ಪರಿಸರ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು

Comments are closed.