ಕರಾವಳಿ

ಇಂದಿನಿಂದ ಗುರುಪುರದಲ್ಲಿ ‘ಗುತ್ತು ನಿಮಗೆಷ್ಟು ಗೊತ್ತ್ತು?’ ವಾರ್ಷಿಕ ಹಬ್ಬ – ವಿಶೇಷ ಚಿಂತನ- ಮಂಥನ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ಜಬನವರಿ, 19: ತುಳುನಾಡಿನ ಗುತ್ತು ಪರಂಪರೆಯ ವಿಶೇಷತೆಯನ್ನು ತಿಳಿಸುವ ಗುತ್ತುದ ವಾರ್ಷಿಕ ಹಬ್ಬದ ಅಂಗವಾಗಿ ಇಂದು ಮತ್ತು ನಾಳೆ ಗುರುಪುರದಲ್ಲಿ ‘ಗುತ್ತು ನಿಮಗೆಷ್ಟು ಗೊತ್ತ್ತು?’ ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗುತ್ತಿನ ವ್ಯವಸ್ಥೆಯನ್ನು ಬಂಡವಾಳಶಾಹಿ, ಒಂದು ವರ್ಗಕ್ಕೆ ಸೇರಿದ ವ್ಯವಸ್ಥೆ ಎಂಬ ಆಪಾದನೆಯನ್ನು ಮಾಡಲಾಗುತ್ತಿದೆ. ಆದರೆ ಅದು ಸುಳ್ಳು ಎಂಬುದನ್ನು ಸಾಬೀತಪಡಿಸುವುದಲ್ಲದೆ, ಆ ವ್ಯವಸ್ಥೆ ಸಮಾಜವಾದಿ ಆಡಳಿತ ವ್ಯವಸ್ಥೆ ಎಂಬುದನ್ನು ಪುಷ್ಟೀಕರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಅವರ ನೇತ್ರತ್ವದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ ಗುತ್ತು, ಬೀಡು, ಬಾರಿಕೆ, ಬಾವ, ಪರಡಿ ಮನೆತನಗಳ ಆಡಳಿತಾತ್ಮಕ ವ್ಯವಸ್ಥೆ ಬಗ್ಗೆ ಮೂರು ವಿಚಾರಗಳಲ್ಲಿ ಈ ಕ್ಷೇತ್ರದ ಅಧ್ಯಯನಕಾರರು ಸಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಲ್ಲಿ ವಿಚಾರ ಮಂಡಿಸಲಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ಸಮನ್ವಯಕಾರರು ಒಟ್ಟು ಅಭಪ್ರಾಯಕ್ಕೆ ಏಕಸೂತ್ರವನ್ನು ಹೆಣೆದು ಉತ್ತರ ನೀಡಲಿದ್ದು, ಸಮಗ್ರ ಆಡಳಿತಾತ್ಮಕ ವ್ಯವಸ್ಥೆಯ ಬಗ್ಗೆ ಮುಖ್ಯಸ್ಥರ ಸಮ್ಮುಖದಲ್ಲಿ ನಿರ್ಣಯ ಸ್ವೀಕರಿಸಿ ಸರ್ವರೂ ಒಪ್ಪುವ ಶಾಸನಬದ್ಧ ವ್ಯವಸ್ಥೆಯನ್ನು ಅಂತಿಮಗೊಳಿಸುವ ಉದ್ದೇಶವಿದೆ ಎಂದು ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪರ್ಬೊದ ಸಿರಿ ಉದ್ಘಾಟನೆಗೊಳ್ಳಲಿದ್ದು, ಇಲ್ಲಿ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ವಿವಿಧ ರೀತಿಯ ಸರಕುಗಳ ಮಳಿಗೆಗಳ ಪ್ರದರ್ಶನ ನಡೆಯಲಿದೆ. ಇಂದು (ಜ. 19ರಂದು) ಸಂಜೆ ಗುತ್ತಿನ ವರ್ಷದ ಒಡ್ಡೊಲಗ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದೆ. ಜ. 20ರಂದು ಮಹಾಬಲೇಶ್ವರ ದೇವಸ್ಥಾನಕ್ಕೆ ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದರವರಿಂದ ತುಲಾಧಾರ ಪ್ರತಿಷ್ಠೆ ಜರಗಲಿದೆ.

ಕಾರ್ಯಕ್ರಮದ 900ರಷ್ಟು ಆಮಂತ್ರಣಗಳನ್ನು ವಿವಿಧ ಧರ್ಮ ಜಾತಿಗೆ ಸೇರಿದ ಗುತ್ತಿನ ಮನೆಯವರಿಗೆ ನೀಡಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 1720 ಗುತ್ತಿನ ಮನೆಗಳಿದ್ದು, 198 ಬೀಡಿನ ಮನೆಗಳಿವೆ ಎಂದು ವರ್ದಮಾನ ದುರ್ಗಾ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಪ್ರಮುಖವಾಗಿ ಚೇಳಾಯರು ಗುತ್ತು ದಿವಾಕರ ಸಾಮಾನಿ, ಮಜಲೊಟ್ಟು ಬೀಡುವಿನ ರೋಹಿತ್ ಕುಮಾರ್ ಕಟೀಲು, ಜಗದೀಶ್ ಅಧಿಕಾರಿ, ಸುಹಾಸ್ ಹೆಗ್ಡೆ, ಸದಾಶಿವ ಶೆಟ್ಟಿ, ರಜನಿ ದುಗ್ಗಣ್ಣ, ಎನ್‌ಆರ್. ಪ್ರದೀಪ್, ಪರಮಾಂದ ವಿ. ಸಾಲ್ಯಾನ್ ಮುಂತಾದವರು ಸಾಥ್ ನೀಡಲಿದ್ದಾರೆ.

Comments are closed.