ಕರಾವಳಿ

ಶಕ್ತಿನಗರ ಕ್ಯಾಶ್ಶೂ ಫ್ಯಾಕ್ಟರಿ ವಿರುದ್ಧ ಧರಣಿ ನಡೆಸುತ್ತಿದ್ದ ನೌಕರರ ಜೊತೆ ಶಾಸಕ ಕಾಮಾತ್ ಮಾತುಕತೆ : ಸಮಸ್ಯೆ ಪರಿಹರಿಸುವ ಭರವಸೆ

Pinterest LinkedIn Tumblr

ಮಂಗಳೂರು : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಶಕ್ತಿನಗರದ ಕ್ಯಾಶ್ಶೂ ಫ್ಯಾಕ್ಟರಿ ಹೊರಗೆ ಧರಣಿ ನಡೆಸುತ್ತಿದ್ದ ಪ್ರತಿಭಟನಾ ನಿರತರನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿಯಾದರು.

ಶಕ್ತಿನಗರದ ಗೇರುಬೀಜ ಕಾರ್ಖಾನೆಯ ಕಾರ್ಮಿಕರನ್ನು ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿಯಾಗಿ ಮನವಿ ಆಲಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರು ಕಡಿಮೆ ಸಂಬಳಕ್ಕೆ ತಮ್ಮನ್ನು ದುಡಿಸುತ್ತಿರುವ ಕಂಪೆನಿಯ ಮಾಲೀಕರ ವರ್ತನೆಯ ಬಗ್ಗೆ ಸಂಕಷ್ಟವನ್ನು ವ್ಯಕ್ತಪಡಿಸಿದರು.

ಹೆಚ್ಚು ಅವಧಿ ದುಡಿಯುವಾಗ ಸಂಬಳ ಮತ್ತು ಸೌಲಭ್ಯವನ್ನು ಹೆಚ್ಚಿಸಬೇಕೆಂದು ಅನೇಕ ಬಾರಿ ಮನವಿ ಮಾಡಿದರೂ ಮಾಲೀಕರು ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಶಾಸಕರ ಗಮನಕ್ಕೆ ತಂದರು. ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಕಾಮತ್ ಅವರು ತಕ್ಷಣ ವಿದೇಶದಲ್ಲಿರುವ ಕಂಪೆನಿಯ ಮಾಲೀಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರ ಮುಂದಾಳುಗಳು ವಿಷಯ ತಿಳಿದ ತಕ್ಷಣ ಓರ್ವ ಜನಪ್ರತಿನಿಧಿಯಾಗಿ ನಮ್ಮ ಸಮಸ್ಯೆ ಆಲಿಸಲು ಮೊದಲು ಬಂದಿರುವ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಧನ್ಯವಾದ ಅರ್ಪಿಸಿದರು. ನಿಮ್ಮ ಹೋರಾಟಕ್ಕೆ ನ್ಯಾಯ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕಾಮತ್ ಅವರು ಪ್ರತಿಭಟನಾಕಾರರಿಗೆ ಹೇಳಿದ್ದಾರೆ.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಸಂಜಯ ಪ್ರಭು, ಕಿಶೋರ್ ಕೊಠಾರಿ, ಬಿಎಂಎಸ್ ಮುಖಂಡ ವಿಶ್ವನಾಥ ಶೆಟ್ಟಿ ಸಹಿತ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಸ್ಥಳಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ :

ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಮನಪಾ ಸದಸ್ಯ ಪ್ರೇಮನಂದ ಶೆಟ್ಟಿ, ಬಿಜೆಪಿ ಮುಖಂಡರಾದ ಕ್ಯಾ.ಬೃಜೆಷ್ ಚೌಟ, ಭಾಸ್ಕರ್ ಚಂದ್ರ ಶೆಟ್ಟಿ ಹಾಗೂ ಪಕ್ಷದ ಮತ್ತಿತರ ಪ್ರಮುಖರು ಪ್ರತಿಭಟನಾ ನಿರತರನ್ನು ಭೇಟಿಯಾಗಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.

Comments are closed.