ಕರಾವಳಿ

ಆರ್ಥಿಕ ಮುಗ್ಗಟ್ಟಿನಿಂದ ಮನನೊಂದು ಕುಂದಾಪುರದ ರಿಕ್ಷಾ ಚಾಲಕ ನೇಣಿಗೆ ಶರಣು

Pinterest LinkedIn Tumblr

ಕುಂದಾಪುರ: ಆರ್ಥಿಕ ಮುಗ್ಗಟ್ಟಿನಿಂದ ನೊಂದು ಯುವಕನೋರ್ವ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೈದ ದಾರುಣ ಘಟನೆ ಇಲ್ಲಿನ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕುಂದಾಪುರ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ನಿವಾಸಿ ಅಣ್ಣಯ್ಯ ಪೂಜಾರಿ ಎಂಬವರ ಪುತ್ರ ಸುಧಾಕರ ಪೂಜಾರಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

ಸುಧಾಕರ ಪೂಜಾರಿ ಹಟ್ಟಿಯಂಗಡಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿನ ಹಾಡಿಯಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಯಿಂದ ಹೊರಟ ಅವರು ಮಧ್ಯಾಹ್ನದ ಊಟಕ್ಕೆ ಮನೆ ಬಂದಿರಲಿಲ್ಲ. ಸಂಶಯಗೊಂಡು ಮನೆಯವರು ಹುಡುಕಾಟ ನಡೆಸಿದ್ದರು. ಆದರೆ ಸಂಜೆ ವೇಳೆಗೆ ಸ್ಥಳೀಯರು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿನ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುಧಾಕರ ಪೂಜಾರಿ ಇತ್ತೀಚೆಗೆ ಹಣಕಾಸಿನ ತೊಂದರೆ ಇರುವುದಾಗಿ ತನ್ನ ಸಹೋದರನಲ್ಲಿ ಹೇಳಿಕೊಂಡಿದ್ದರು. ಇದೇ ವಿಚಾರವಾಗಿ ಸುಧಾಕರ ಪೂಜಾರಿಯವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತ ಸುಧಾಕರ ಪೂಜಾರಿ ಅವಿವಾಹಿತರಗಿದ್ದಾರೆ.

ಕಂಡ್ಲೂರು ಠಾಣಾಧಿಕಾರಿ ಶ್ರೀಧರ ನಾಯ್ಕ್ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.