ಕರಾವಳಿ

ರಂಗಮಂದಿರ, ಮಾಶಾಸನ ಸಹಿತ 10 ಬೇಡಿಕೆಗಳಿಗೆ ಒತ್ತಾಯಿಸಿ ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಜಯಮಾಲರಿಗೆ ಮನವಿ

Pinterest LinkedIn Tumblr

ಮಂಗಳೂರು : ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು ಸಾಕಾರಗೊಳಿಸಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳುಸಾಹಿತ್ಯ ಅಕಾಡೆಮಿಯಿಂದ ನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಇರುವ ಕಾನೂನು ತೊಡಕನ್ನು ಹೋಗಲಾಡಿಸಬೇಕು ಮೊದಲಾದ ಹತ್ತು ಬೇಡಿಕೆಗಳನ್ನು ಮುಂದಿಟ್ಟು ತುಳುನಾಟಕ ಕಲಾವಿದರ ಒಕ್ಕೂಟ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲ ಅವರಿಗೆ ಮನವಿಯನ್ನು ಸಲ್ಲಿಸಿದೆ.

ಜಿಲ್ಲೆಗೆ ಭೇಟಿ ನೀಡಿರುವ ಜಯಮಾಲ ಅವರನ್ನು ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಅವರ ನಿಯೋಗವು ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿ ಮಾಡಿ ತುಳುರಂಗಭೂಮಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕುರಿತು ಅವರಿಗೆ ಮನವಿ ಸಲ್ಲಿಸಿದರು.

ಜಯಮಾಲ ಅವರಿಗೆ ನೀಡಿದ ಮನವಿಯಲ್ಲಿ ಅಶಕ್ತ ಅರ್ಹ ಕಲಾವಿದರಿಗೆ ನೀಡುತ್ತಿರುವ ಮಾಶಾಸನ ರೂ 1,500ರೂಪಾಯಿಯನ್ನು 5,000ಕ್ಕೆ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗಳಿಗೆ, ತುಳುನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಕಾನೂನಿನ ತೊಂದರೆಯಿರುವುದರಿಂದ ರಂಗ ಚಟುವಟಿಕೆಗಳು ಕುಂಠಿತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಪೌರಾಣಿಕ, ಚಾರಿತ್ರಿಕ, ಐತಿಹಾಸಿಕ ನಾಟಕಗಳಿಗೆ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನಿಂದ ಹೆಚ್ಚಿನ ಆರ್ಥಿಕ ಅನುದಾನ ಒದಗಿಸಲು ಮನವಿ ಮಾಡಲಾಗಿದೆ.

ಮಹಿಳಾ ನಾಟಕೋತ್ಸವ, ಮಕ್ಕಳ ನಾಟಕೋತ್ಸವ, ಕಾಲೇಜು ರಂಗೋತ್ಸವ, ರಂಗ ತರಬೇತಿ ಶಿಬಿರ, ರಂಗ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರ್ಥಿಕ ನೆರವು , ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುನಾಟಕ ಪ್ರದರ್ಶಿಸುವ ತಂಡಗಳಿಗೆ ವಿಶೇಷ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂದರ್ಭಗಳಲ್ಲಿ ತುಳು ನಾಟಕರಂಗದ‌ಅರ್ಹ ಸಾಧಕ ಕಲಾವಿದರನ್ನು ಗುರುತಿಸುವುದು, ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ತುಳು ಮಾತೃಭಾಷೆಯ ಕಲಾವಿದರಿಗೂ ಸದಸ್ಯತನ ನೀಡುವುದು ಹಾಗೂ ಅಕಾಡೆಮಿ ಪ್ರಶಸ್ತಿಗೂ ತುಳುನಾಟಕ ರಂಗದ ಅರ್ಹ ಕಲಾವಿದರನ್ನು ಪರಿಗಣಿಸುವುದು, ರಂಗಭೂಮಿಗೆ ಸಂಬಂಧಿಸಿದಂತೆ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು, ಹಾಗೂ ನಾಡಹಬ್ಬ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ವೀರಪುರುಷರ, ಮಹಿಳಾಮಣಿಗಳ, ಸ್ವಾಂತಂತ್ರ್ಯ ಹೋರಾಟಗಾರರ, ಕುರಿತಾದ ನಾಟಕ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ರಂಗಕರ್ಮಿ ವಿ.ಜಿ ಪಾಲ್, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ. ಗೋಕುಲ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.

Comments are closed.