ಕರಾವಳಿ

ಕೈರಂಗಳ ಪ್ರಕರಣ :ಗೋ ಕಳ್ಳರನ್ನು ಕೂಡಲೇ ಬಂಧಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹ

Pinterest LinkedIn Tumblr

ಮಂಗಳೂರು : ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷದಿಂದ ರಾಜಾರೋಷವಾಗಿ ಗೋ ಕಳ್ಳತನ ನಡೆಯುತ್ತಿದೆ. ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಗೋಕಳ್ಳತನವಾಗಿದೆ. ಗೋ ಹಂತಕರಿಗೆ ಕಾಂಗ್ರೆಸ್ ಸಚಿವರ ನೇರ ಬೆಂಬಲ ಇರುವ ಕಾರಣ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ.

ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ನಡೆದಿರುವ ಬಗ್ಗೆ ಗೋ ಶಾಲೆ ಸಮಿತಿಯ ಅಧ್ಯಕ್ಷ ಟಿ.ಜಿ.ರಾಜರಾಮ ಭಟ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೊ ಹಂತಕರಿಂದಾಗಿ ಜಿಲ್ಲೆಯಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ತಲವಾರು ತೋರಿಸಿ ದನಗಳನ್ನು ಕದ್ದೊಯ್ಯುವ ಪ್ರಕರಣ ಸಾಮಾನ್ಯವಾಗಿದೆ. ಜಿಲ್ಲೆಯ ಸಚಿವರುಗಳು ಇದುವರೆಗೆ ಗೋ ಕಳ್ಳತನದ ಬಗ್ಗೆ ಯಾವುದೇ ಹೇಳಿಕೆ ನೀಡದೇ ಇರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಗೋ ಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗೋಕಳ್ಳರಿಗೆ ಬೆಂಬಲ ನೀಡಿದ್ದಾರೆ. ಇಂತಹ ನೀಚ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ತಿಳಿಸಿದ್ದಾರೆ.

Comments are closed.