ಕರಾವಳಿ

ಕುಂದಾಪುರ(ಗಂಗೊಳ್ಳಿ): ಬಸ್-ಬೈಕ್ ಮುಖಾಮುಖಿ ಢಿಕ್ಕಿಯಾಗಿ ಮೆಸ್ಕಾಂ ಸಿಬ್ಬಂದಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಬೈಕ್ ಹಾಗೂ ಖಾಸಗಿ ಬಸ್ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಮೆಸ್ಕಾಂ ಸಿಬ್ಬಂದಿಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದ ದಾರುಣ ಘಟನೆ ಇಲ್ಲಿನ ಗಂಗೊಳ್ಳಿ ಸಮೀಪದ ನಾಯಕವಾಡಿ ರಾಮಮಂದಿರದ ಬಳಿ ವರದಿಯಾಗಿದೆ.

ಮೃತ ಬೈಕ್ ಸವಾರರನ್ನು ನಾಯಕವಾಡಿ ನಿವಾಸಿ ಗಣೇಶ್ ದೇವಾಡಿಗ (59) ಎಂದು ಗುರುತಿಸಲಾಗಿದೆ.

ಕಳೆದ ಮೂರು ದಿನಗಳ ತಿರುಪತಿ ಯಾತ್ರೆಗೆ ತೆರಳಿದ್ದ ಗಣೇಶ್ ದೇವಾಡಿದ ನಿನ್ನೆಯಷ್ಟೆ ಮನೆಗೆ ವಾಪಾಸಾಗಿದ್ದರು. ಇಂದು ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಖಾಸಗಿ ಬಸ್ ಢಿಕ್ಕಿಯಾಗಿದೆ. ಢಿಕ್ಕಿಯ ತೀವ್ರತೆಯಿಂದ ರಸ್ತೆಗೆ ಬಿದ್ದ ಗಣೇಶ್ ತಲೆಗೆ ಗಂಭೀರ ಗಾಯವಾದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು.

ಕೂಡಲೇ ಸ್ಥಳಕ್ಕಾಗಮಿಸಿದ ಗಂಗೊಳ್ಳಿಯ 24×7 ಆಪತ್ಭಾಂದವ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಸಿಬ್ಬಂದಿ ಅಕ್ಷಯ್ ಖಾರ್ವಿ ಅವರು ಅಪಘಾತದಲ್ಲಿ ಗಾಯಗೊಂಡ ಗಣೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರೂ ಕೂಡ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಗಂಗೊಳ್ಳಿ ಮೆಸ್ಕಾಂ ಕಚೇರಿಯಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಣೇಶ್ ಮುಂಬರುವ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು ಎನ್ನಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Comments are closed.