ಕರಾವಳಿ

ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ- ಶಿವಾನಂದ ಕಾಪಶಿ

Pinterest LinkedIn Tumblr

ಉಡುಪಿ: ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಒಡ್ಡುವ ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೇ , ತಮಗೆ ಅರ್ಹ ಅನಿಸುವ ವ್ಯಕ್ತಿಗೆ ಮತದಾನ ಮಾಡಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಅವರು ಭಾನುವಾರ, ನಿಟ್ಟೂರಿನ ಮಹಾಬಲ ಶೆಟ್ಟಿ ಕಾಪೌಂಡ್ ನಲ್ಲಿರುವ ವಲಸೆ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ, ಅಲ್ಲಿನ ಮತದಾರರಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಹಾಗೂ ಮತದಾನ ಮಾಡುವ ಕುರಿತಂತೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.

ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ಯಾವುದೇ ಆಸೆ, ಅಮಿಷ, ಬೆದರಿಕೆಗಳಿಗೆ ಮಣಿಯದೇ ನಿರ್ಭೀತಿಯಿಂದ ಮತ ಚಲಾಯಿಸಿ, ಮುಕ್ತ, ಪಾರದರ್ಶಕ, ನ್ಯಾಯ ಸಮ್ಮತ ಚುನಾವಣೆಗೆ ಯಾವುದೇ ಅಡೆ ತಡೆಗಳಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಟೋಲ್ ಫ್ರೀ ಸಂಖ್ಯೆ 1077 ಗೆ ಮಾಹಿತಿ ನೀಡುವಂತೆ ತಿಳಿಸಿದ ಕಾಪಶಿ, ಅಂಗವಿಕಲ ಮತದಾರರು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 0820-2574811 ಗೆ ಮುಂಚಿತವಾಗಿ ಮಾಹಿತಿ ನೀಡಿದ್ದಲ್ಲಿ, ಮತದಾನದ ದಿನ ಅವರನ್ನು ಮತಕೇಂದ್ರಕ್ಕೆ ಕರೆದೊಯ್ದು, ಮತದಾನ ಮಾಡಿಸಿ ತಂದು ಬಿಡಲಾಗುವುದು ಎಂದು ಹೇಳಿದರು.

ಜನವರಿ 1 ಕ್ಕೆ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಇನ್ನೂ ಅವಕಾಶವಿದ್ದು, ಕೂಡಲೇ ತಮ್ಮ ಹೆಸರು ಸೇರ್ಪಡೆ ಮಾಡುವಂತೆ ಹಾಗೂ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿರುವವರು , ಸಮೀಪ ಬಿ‌ಎಲ್‌ಓ ಅವನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಕಾಪಶಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತಯಂತ್ರದ ಬಳಕೆ ಹಾಗೂ ವಿವಿ ಪ್ಯಾಟ್ ಬಳಕೆ ಮತ್ತು ಮಹತ್ವದ ಕುರಿತು ಅರಿವು ಮೂಡಿಸಿ, ಕರಪತ್ರಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಜಿಲ್ಲಾ ವಿಕಲ ಚೇತನ ಇಲಾಖಾಧಿಕಾರಿ ನಿರಂಜನ್ ಭಟ್, ಶಿಕ್ಷಣಾಧಿಕಾರಿ ನಾಗೇಶ್ ಶಾನುಭೋಗ್,ಶಿಕ್ಷಣ ಇಲಾಖೆಯ ಪರಿವೀಕ್ಷಕ ನಾಗರಾಜ್, ಪ್ರಶಾಂತ್ ಶೆಟ್ಟಿ ಹಾವಂಜೆ , ಬ್ರಹ್ಮಾವರ ಬಿ‌ಇ‌ಓ ಕಚೇರಿಯ ಶಿಕ್ಷಣ ಸಂಯೋಜಕರು, ಮತ್ತಿತತರರು ಉಪಸ್ಥಿತರಿದ್ದರು.

Comments are closed.