ಮಂಗಳೂರು, ಮಾರ್ಚ್. 27: ಮಂಗಳೂರಿನ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿಯಿಂದ ಹಫ್ತಾಕ್ಕಾಗಿ ಬೇಡಿಕೆಯಿಟ್ಟು ಬೆದರಿಕೆ ಕರೆ ಬರುತ್ತಿದ್ದ ಬಗ್ಗೆ ಕಂಕನಾಡಿ ನಗರದ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಪಂಪ್ವೆಲ್ನಲ್ಲಿರುವ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ನ ಮಾಲಕ ಡಾ. ಅರುಣ್ ಕುಮಾರ್ ರೈ ಅವರ ಮೊಬೈಲ್ಗೆ ಮಾ.17ರಿಂದ ಮಾ.23ರವರೆಗೆ ಇಂಟರ್ನೆಟ್ ನಂಬರ್ ಗಳಿಂದ ಬೆದರಿಕೆ ಕರೆ ಬಂದಿವೆ. ಭೂಗತ ಪಾತಕಿ ಕಲಿ ಯೋಗಿಶ್ ನಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ.
ಕಲಿ ಯೋಗೀಶ ಎಂದು ಪರಿಚಯಿಸಿಕೊಂಡ ಭೂಗತ ಪಾತಕಿಯೊಬ್ಬ 50ಲಕ್ಷ ರೂ. ಹಫ್ತಾ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದಾನೆ. ಇಲ್ಲದಿದ್ದರೆ ತಮ್ಮ ಶೂಟರ್ ಹುಡುಗರನ್ನು ಕಚೇರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ದೂರವಾಣಿ ಕರೆಗಳ ದಾಖಲೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Comments are closed.