ಉಡುಪಿ: ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಒರಿಸ್ಸಾದಿಂದ ತೆಗೆದುಕೊಂಡು ಬಂದು ಮಣಿಪಾಲ ಹಾಗೂ ನಿಟ್ಟೆಯ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಕಟ್ಟಡವೊಂದರಲ್ಲಿ ಇಟ್ಟಿದ್ದ ವೇಳೆ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ 2.520 ಕೆ.ಜಿ ಗಾಂಜಾ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಒರಿಸ್ಸಾ ಮೂಲದ ಸದ್ಯ ಕಾರ್ಕಳ ಕಲ್ಯಾ ಗ್ರಾಮದ ನಿವಾಸಿಗಳಾದ ಸಫೀಕ್ವುದ್ದೀನ್ (40), ಸಂತೋಷ ಕುಮಾರ್ ಸಿಂಗ್ (26) ಬಂಧಿತ ಆರೋಪಿಗಳು.
ಪ್ಲಾಸ್ಟಿಕ್ ಕ್ಯಾನ್ನಲ್ಲಿ ಇಟ್ಟುಕೊಂಡಿದ್ದ ಗಾಂಜಾ 1.680 ಕೆ.ಜಿ ಹಾಗೂ ಒಂದು ಪ್ಲಾಸ್ಟಿಕ್ ಕೈಚೀಲದಲ್ಲಿ ಇಟ್ಟುಕೊಂಡಿದ್ದ ತಲಾ 14 ಗ್ರಾಂಗಳ 60 ಪ್ಯಾಕೇಟ್ ಒಟ್ಟು ತೂಕ 840 ಗ್ರಾಂ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಗಾಂಜಾದ ಒಟ್ಟು ತೂಕ 2.520 ಕೆ.ಜಿ ಆಗಿದ್ದು, ಅಂದಾಜು ಮೌಲ್ಯ 75,000/- ರೂಪಾಯಿ ಎನ್ನಲಾಗಿದೆ. ಗಾಂಜಾ ಶೇಖರಿಸಿ ಇಟ್ಟಿದ್ದ ಪ್ಲಾಸ್ಟಿಕ್ ಕ್ಯಾನ್ -1, ಪ್ಲಾಸ್ಟಿಕ್ ಕೈ ಚೀಲ -1, ಗಾಂಜಾ ತೂಕ ಮಾಡಲು ಇಟ್ಟುಕೊಂಡಿದ್ದ ಡಿಜಿಟಲ್ ಸ್ಕೇಲ್ -1, ಗಿರಾಕಿಗಳಿಗೆ ಗಾಂಜಾ ಹಾಕಿಕೊಡಲು ಇಟ್ಟುಕೊಂಡಿದ್ದ ಸಣ್ಣ ಸಣ್ಣ ಪ್ಲಾಸ್ಟಿಕ್ ತೊಟ್ಟೆಗಳು -28, ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಕೆಎ 20 ಯು 1713 ನೇ ನಂಬ್ರದ ಟಿವಿಎಸ್ ಸ್ಕೂಟಿ ಪೆಪ್ -1 ಹಾಗೂ 2 ನೋಕಿಯಾ ಮೊಬೈಲ್ ಫೋನ್ಗಳನ್ನು ಸ್ವಾಧೀನಪಡಿಸಿಕೊಂಡು ಕಾರ್ಕಳ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರ್ಯಾಚರಣೆ ತಂಡ..
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ನಿರ್ದೇಶನದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಪೊಲೀಸ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್ ಎ ರವರು ಡಿ.ಸಿ.ಐ.ಬಿ ಘಟಕದ ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ಸುರೇಶ, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಇದ್ದರು.
Comments are closed.