ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗಾಯಕರು ಮತ್ತು ವಾದಕರ ಸಂಘಟನೆ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ದಶಮಾನೋತ್ಸವ ವರ್ಷದ 4ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಸಂಗೀತದೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಬಳಿ ರವಿವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಕಾರ್ಯಕ್ರಮವನ್ನು ಅದಾನಿ ಗ್ರೂಪ್ ಕಂಪೆನಿಯ ಉಪಾಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.
ಪಾಲಿಕೆ ಬಳಿಯಿಂದ ಲೇಡಿಹಿಲ್, ಉರ್ವಾ ಮಾರುಕಟ್ಟೆ, ಸುಲ್ತಾನ್ಬತ್ತೇರಿ, ಬೋಳೂರು, ಮಣ್ಣಗುಡ್ಡೆ, ಗಾಂಧಿನಗರದಿಂದ ಪುನಃ ಪಾಲಿಕೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 150ಕ್ಕೂ ಮಿಕ್ಕಿ ಒಕ್ಕೂಟದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಇದೇ ವೇಳೆ ಸಂಗೀತ ಕಲಾವಿದರು ಸಂಚಾರಿ ವಾಹನ ವೇದಿಕೆಯಲ್ಲಿ ದೇಶ ಭಕ್ತಿ ಗೀತಾ ಸಂಗೀತದೊಂದಿಗೆ ಎಲ್ಲ ಮಾರ್ಗಗಳಲ್ಲಿ ಸಂಚರಿಸಿತು. ಗಾಯಕ ರವೀಂದ್ರ ಪ್ರಭು, ಶ್ರೀಕಾಂತ್ ಕಾಮತ್, ಮಹಮದ್ ಹನೀಫ್, ಶ್ರೀನಿವಾಸ ಭಾಗವತ್ ಸಹಿತ ಅನೇಕ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು.
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಸಂಗೀತ ನಿರ್ದೇಶಕ ಚರಣ್ ಕುಮಾರ್, ವಸಂತ ಕದ್ರಿ, ಎಂಸಿಎಫ್ ಅಧಿಕಾರಿ ಸದಾನಂದ ಎಂ., ಸಾನ್ನಿಧ್ಯ ವಿಶೇಷ ಮಕ್ಕಳ ಶಾಲೆಯ ಆಡಳಿತಾಧಿಕಾರಿ ವಸಂತ ಶೆಟ್ಟಿ, ರಾಷ್ಟ್ರೀಯ ಸ್ಕೇಟಿಂಗ್ ಮಾಸ್ಟರ್ ಮಹೇಶ್, ಸಂಯೋಜಕ ಯಶವಂತ್, ಕೆ.ಕೆ. ನೌಶದ್ ಉಪಸ್ಥಿತರಿದ್ದರು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದರು. ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಕಾಮತ್ ಅವರು ವಂದಿಸಿದರು.
Comments are closed.