ಕರಾವಳಿ

ಕಾರ್ಕಳ: ಪತ್ನಿಯ ಕೈ-ಕಾಲು ಕಡಿದು ಓಡಿಹೋದ ಕ್ರೂರಿ ಪತಿ ಭಟ್ಕಳದಲ್ಲಿ ಅರೆಸ್ಟ್

Pinterest LinkedIn Tumblr

ಉಡುಪಿ/ಭಟ್ಕಳ: ಪತ್ನಿಯೊಂದಿಗೆ ಜಗಳವಾಡಿ ಆಕೆಯ ಕೈ-ಕಾಲುಗಳನ್ನು ಕ್ರೂರವಾಗಿ ಕಡಿದು ಕೊಲೆಗೈಯಲು ಯತ್ನಿಸಿದ ಪ್ರಕರಣದ ಆರೋಪಿ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಪತ್ನಿಯಾದ ಅನುಶ್ರೀ(23)ಯನ್ನು ಕಡಿದು ತಲೆಮರೆಸಿಕೊಂಡಿರುವ ಆರೋಪಿ ಹೆಮುಂಡೆಯ ಪಟ್ರಬೆಟ್ಟು ನಿವಾಸಿ ಸಂತೋಷ್ ಪೂಜಾರಿ(27)ಯನ್ನು ಭಟ್ಕಳದಲ್ಲಿ ಬಂಧಿಸಲಾಗಿದೆ.

ಜನವರಿ 27 ಶನಿವಾರ ಸಂಜೆ 5.45ರ ವೇಳೆಗೆ ಅನುಶ್ರೀಯವರು ಕಾರ್ಕಳದಿಂದ ತೆಳ್ಳಾರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿ ಬಂದು ಇಳಿದಿದ್ದರು. ಹೈಸ್ಕೂಲ್ ಎದುರಿನ ಕಾಲು ದಾರಿ ಮಾರ್ಗವಾಗಿ ಸ್ವರ್ಣ ನದಿ ದಾಟಿ ಹೆರ್ಮಂಡೆಗೆ ಹೋಗುತ್ತಿದ್ದಾಗ ಆರೋಪಿ ಪತಿ ಸಂತೋಷ್ ಪೂಜಾರಿ ಹಿಂದಿನಿಂದ ಬಂದು ಅವರ ಮೇಲೆ ಏಕಾಏಕಿಯಾಗಿ ಎರಗಿದ್ದಾನೆ. ಅನುಶ್ರೀಯವರಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಕತ್ತಿಯಿಂದ ಅವರ ಕೈಗಳನ್ನು ಹಾಗೂ ಕಾಲುಗಳನ್ನು ಕತ್ತರಿಸಿ ಹಾಕಿದ್ದಾನೆ. ಡಿವೋರ್ಸ್ ಕೊಡುವ ಬದಲು ನಿನ್ನನ್ನೇ ಮುಗಿಸುತ್ತೇನೆ ಎಂದು ಸಂತೋಷ್ ಪೂಜಾರಿ ಈ ಸಂದರ್ಭ ಕೂಗಿ ಹೇಳಿದ್ದಾನೆ ಎಂದು ಅನುಶ್ರೀ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆರೋಪಿ ಬಂಧನ….
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ನಿರ್ದೇಶನದಲ್ಲಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನವಣೆ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ಎ ರವರ ನೇತೃತ್ವದ ತಂಡ ತಲೆಮರೆಸಿಕೊಂಡಿದ್ದ ಆರೋಪಿ ಸಂತೋಷನನ್ನು ಭಟ್ಕಳ ರೈಲು ನಿಲ್ದಾಣದ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದು ಮುಂದಿನ ಕ್ರಮದ ಬಗ್ಗೆ ಅಜೆಕಾರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ ಘಟಕದ ಎಎಸ್‌ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಂದರ್, ರಾಮು ಹೆಗ್ಡೆ, ಸುರೇಶ, ಚಂದ್ರ ಶೆಟ್ಟಿ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಮೊದಲಾದವರು ಸಹಕರಿಸಿರುತ್ತಾರೆ.

Comments are closed.